ದೇಶ, ಸಂಸ್ಕೃತಿಯ ರಕ್ಷಣೆ ತಾಯಂದಿರ ಕೈಯಲ್ಲಿದೆ – ಮಾತಾ ವಿವೇಕಮಯಿ…

ಕಲ್ಲಡ್ಕ: ದೇಶ ,ಸಮಾಜವನ್ನು ಒಂದು ಗೂಡಿಸುವ ಶಕ್ತಿ ತಾಯಂದಿರ ಕೈಯಲ್ಲಿದೆ. ಹಿಂದೂ ಪರಂಪರೆಯಲ್ಲಿ ಶ್ರೀರಾಮಚಂದ್ರ ಮತ್ತು ಸೀತಾಮಾತೆ ಆದರ್ಶವಾಗಿದ್ದಾರೆ ಎಂದು ಬೆಂಗಳೂರು ವಿಜಯನಗರ ಶ್ರೀ ಭವತಾರಿಣಿ ಅಶ್ರಮದ ಸಾಧ್ವಿ ಮಾತಾ ವಿವೇಕಮಯಿ ನುಡಿದರು.
ಕಲ್ಲಡ್ಕ ಶ್ರೀ ರಾಮ ಮಂದಿರದ ಶತಾಬ್ದಿ ಸಂಭ್ರಮದ ಪ್ರಯುಕ್ತ ಎರಡನೇ ದಿನ ಶುಕ್ರವಾರ ನಡೆದ “ಮಾತೃಸಂಗಮ” ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನಗೈದರು.
ಸೌಮ್ಯ ಮತ್ತು ಕೋಮಲತೆಗೆ ಪ್ರತಿರೂಪವಾದ ಸ್ತ್ರೀಯು ದುರ್ಗಾಮಾತೆಯಾಗಿ ಸಮಾಜದ ರಕ್ಷಣೆಗೂ ಸಮರ್ಥಳು ಎಂದ ಅವರು ನಮ್ಮ ಧರ್ಮವನ್ನು ಬಿಟ್ಟು ದೇಶಕ್ಕೆ ಅಸ್ತಿತ್ವವೇ ಇಲ್ಲ. ಭಾರತ ಪುಣ್ಯ ಭೂಮಿ,ಕರ್ಮಭೂಮಿ ಜಗತ್ತು ಉಳಿಯಬೇಕಾದರೆ ಭಾರತ ಉಳಿಯ ಬೇಕು. ವಿವೇಕಾನಂದರ ವಿಚಾರಗಳು ನಮಗೆ ಮಾರ್ಗದರ್ಶಿಯಾಗಿದೆ ಎಂದರು.
ವೈಶಾಲ್ಯತೆ ನಮ್ಮ ಸಂಸ್ಕೃತಿಯಲ್ಲಿದೆ. ಇದನ್ನು ಉಳಿಸುವ ಜವಾಬ್ದಾರಿಯು ನಮ್ಮ ಮೇಲಿದೆ. ಮಕ್ಕಳನ್ನು ಸಚ್ಚಾರಿತ್ರ್ಯ ವ್ಯಕ್ತಿಗಳು ಮತ್ತು ಶಕ್ತಿವಂತರನ್ನಾಗಿ ನಿರ್ಮಾಣಮಾಡುವ ಜವಾಬ್ದಾರಿ ತಾಯಂದಿರಿಗಿದೆ ಎಂದರು.
ದೇಶ ಮೊದಲು- ಅನುರಾಧ ವೆಂಕಟೇಶ್…
ಅತಿಥಿಯಾಗಿ ಭಾಗವಹಿಸಿದ್ದ ಹುತಾತ್ಮ ವೀರ ಯೋಧ ಕ್ಯಾ.ಎಂ.ವಿ.ಪ್ರಾಂಜಲ್ ಅವರ ತಾಯಿ ಕೆ.ಆರ್. ಅನುರಾಧ ವೆಂಕಟೇಶ ಅವರು ಮಾತನಾಡಿ ದೇಶದ ರಕ್ಷಣೆ ಮತ್ತು ಹಿತಕ್ಕಾಗಿ ಹೋರಾಡಿವ ಸೈನಿಕರು ಕಠಿಣ ತರಬೇತಿ‌ ಪಡೆದು‌ ದೇಶಕ್ಕಾಗಿ ತಮ್ಮ ಜೀವನ ಸಮರ್ಪಿಸುತ್ತಾರೆ. ತನ್ನ ಸ್ವಂತ ಅವಶ್ಯಕತೆಗಳಿಗಿಂತ ದೇಶ ಮೊದಲು ಎಂಬ ಧ್ಯೇಯವನ್ನಿರಿಸಿ ಹೋರಾಡುತ್ತಾರೆ ಎಂದರು.
ನಮ್ಮ ದೇಶ ಪ್ರೇಮ ಮನೆ,ಮನೆಗಳಲ್ಲಿ ಜಾಗೃತವಾದಾಗ ಹುತಾತ್ಮ ವೀರಯೋಧ ಪ್ರಾಂಜಲನಂತಹ ಸೈನಿಕರ ಬಲಿದಾನಕ್ಕೆ ಶಾಂತಿ ಸಿಗುತ್ತದೆ. ಅರ್ಥ ಬರುತ್ತದೆ. ಚೀನಾ , ಪಾಕಿಸ್ತಾನದ ಸೈನಿಕರು ನಮ್ಮ ದೇಶದ ಸೈನಿಕರ ರಕ್ತವನ್ನು ಹರಿಸಿದರು. ಅವರೊಂದಿಗೆ‌ ಕ್ರೀಡೆ,ಸಾಂಸ್ಕೃತಿಕ ವಿನಿಮಯ ಮಾಡುವುದು ಎಷ್ಟು ಸರಿ ಎಂದು ವಿಮರ್ಶೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆ ವಹಿಸಿದ್ದಡಾ.ಕಮಲಾ ಪ್ರಭಾಕರ ಭಟ್ ಅವರು ಮಾತನಾಡಿ
ಮಕ್ಕಳಲ್ಲಿ ರಾಷ್ಟ್ರ ಭಕ್ತಿ, ದೈವ ಭಕ್ತಿಯನ್ನು ಬೆಳೆಸುವ ಶಿಕ್ಷಣ ಅಗತ್ಯವಾಗಿದೆ. ಹಿರಿಯರು ತಮ್ಮ ಆಚರಣೆ ಮೂಲಕ ಕಿರಿಯರಿಗೆ ಆದರ್ಶವಾಗಬೇಕು ಎಂದರು.
ಶತಾಬ್ದಿ ಸಂಭ್ರಮ ಸಮಿತಿ ಕಾರ್ಯದರ್ಶಿಗಳಾದ ಶೋಭಾ ಶಿವಪ್ಪ, ಲಕ್ಷ್ಮೀ ವಿ.ಪ್ರಭು, ಮಮತಾ ಆರ್. ಕಶೆಕೋಡಿ ಉಪಸ್ಥಿತರಿದ್ದರು.
ಶಾಂತ ಲಕ್ಷ್ಮೀ ಪ್ರೇರಣಾಗೀತೆ ಹಾಡಿದರು. ಶಿಕ್ಷಕಿ ಸೌಮ್ಯ‌ ಸ್ವಾಗತಿಸಿದರು. ಲಖಿತಾ ಆರ್ ಶೆಟ್ಟಿ ವಂದಿಸಿದರು.ಶುಭಲಕ್ಷ್ಮೀ ಶಿವಗಿರಿ, ರಾಧಾಕೃಷ್ಣ ಅಡ್ಯಂತಾಯ ಅವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಹಸ್ರ ಸಂಖ್ಯೆಯಲ್ಲಿ ಮಾತೆಯರು ಭಾಗವಹಿಸಿದ್ದರು.
ಇದಕ್ಕು ಮುನ್ನ ಸಾಮೂಹಿಕ ಕುಂಕುಮಾರ್ಚನೆ, ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಪದ್ಮಿನಿ ನಾಯಕ್ ಬಳಗ ಮತ್ತು ದೇವರಾಯ ಕಿಣಿ ವೃಂದದವರಿಂದ ಸ್ವಾನುಭೂತಿ ಭಜನಾ ಕಾರ್ಯಕ್ರಮ ನಡೆಯಿತು.
ಶತಾಬ್ದಿ ಸಂಭ್ರಮ ಸಮಿತಿ‌ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಹುತಾತ್ಮ ವೀರಯೋಧ ಪ್ರಾಂಜಲ್ ಅವರ ತಂದೆ ಕೆ.ಆರ್. ವೆಂಕಟೇಶ್ , ವಿವಿಧ ಸಮಿತಿ ಪ್ರಮುಖರಾದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ನಾರಾಯಣ ಸೋಮಯಾಜಿ, ವಸಂತಮಾಧವ, ಚೆನ್ನಪ್ಪ ಆರ್.ಕೋಟ್ಯಾನ್, ನಾಗೇಶ ಕಲ್ಲಡ್ಕ,ಸುಜೀತ್ ಕೊಟ್ಟಾರಿ,ಸಂದೇಶ್ ಶೆಟ್ಟಿ ಆರೆಬೆಟ್ಟು,ಕ.ಕೃಷ್ಣಪ್ಪ,ದಿನೇಶ್ ಅಮ್ಟೂರು,ರಮೇಶ ಎನ್.,ಪುಪ್ಪರಾಜ ಶೆಟ್ಟಿಗಾರ್ ,ಸುಧಾ ಸೂರ್ಯನಾರಾಯಣ ಭಟ್ ಕಶೆಕೋಡಿ, ಮೊದಲಾದವರಿದ್ದರು.

whatsapp image 2024 02 23 at 10.43.00 pm (1)

whatsapp image 2024 02 23 at 10.43.00 pm (2)

whatsapp image 2024 02 23 at 10.43.01 pm

Sponsors

Related Articles

Back to top button