ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ…

'ಹಿರಿಯ ವಿದ್ವನ್ಮಣಿಗಳ ಕಣ್ಮರೆ ನಮ್ಮ ತಲೆಮಾರಿನ ದುರಂತ': ಕುಕ್ಕುವಳ್ಳಿ…

ಮಂಗಳೂರು: ‘ಕಲೆ, ಸಾಹಿತ್ಯ, ಸಂಸ್ಕೃತಿಗಳ ಪ್ರಸರಣದಲ್ಲಿ ಹಿರಿಯರ ಕೊಡುಗೆ ಅಪಾರ. ಇತ್ತೀಚಿನ ವರ್ಷಗಳಲ್ಲಿ ಅಂತಹ ಹಲವು ಹಿರಿಯ ವಿದ್ಮನ್ಮಣಿಗಳು ಕಣ್ಮರೆಯಾದುದು ನಮ್ಮ ತಲೆಮಾರಿನ ದೊಡ್ಡ ದುರಂತ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ‌ ಕುಕ್ಕುವಳ್ಳಿ ಹೇಳಿದ್ದಾರೆ. ನಗರದ ಕೊಡಿಯಾಲಬೈಲ್ ‘ಶಿವಾರ್ಪಣಂ’ ವಠಾರದಲ್ಲಿ ಜರಗಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಇತ್ತೀಚೆಗೆ ನಿಧನರಾದ ಬಲಿಪ ನಾರಾಯಣ ಭಾಗವತ ಮತ್ತು ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
‘ಬಲಿಪ ಭಾಗವತರು ಮತ್ತು ಮುದ್ರಾಡಿಯವರು ಇಬ್ಬರೂ ತೀರಾ ಸಾತ್ವಿಕ ಸ್ವಭಾವದ ವಿದ್ವಾಂಸರು. ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಗಣನೀಯ. ಅವರ ನಿಧನದಿಂದ ನಾಡಿನ ವಿದ್ವತ್ ಪರಂಪರೆಯ ಹಿರಿಯ ಕೊಂಡಿಗಳು ಕಳಚಿ ಹೋದಂತಾಯಿತು’ ಎಂದವರು ವಿಷಾದ ವ್ಯಕ್ತಪಡಿಸಿದರು. ಬಳಿಕ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಗಣ್ಯರಿಗೆ ಸದ್ಗತಿ ಕೋರಲಾಯಿತು.
ಎಪ್ರಿಲ್ ನಲ್ಲಿ ‘ನಮ್ಮ ಆಬ್ಬಕ್ಕ – 2023’ಸಾಂಸ್ಕೃತಿಕ ಉತ್ಸವ:
ಪ್ರತಿಷ್ಠಾನದ ವತಿಯಿಂದ ಈ ಬಾರಿಯ ‘ನಮ್ಮ ಅಬ್ಬಕ್ಕ’ ಸಾಂಸ್ಕೃತಿಕ ಉತ್ಸವವನ್ನು ಬರುವ ಏಪ್ರಿಲ್ ತಿಂಗಳಲ್ಲಿ ಏರ್ಪಡಿಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂದರ್ಭ ವಿವಿಧ ವಯೋಮಾನದವರಿಗೆ ಸಾಂಸ್ಕೃತಿಕ ಸ್ಪರ್ಧೆಗಳು, ರಾಣಿ ಅಬ್ಬಕ್ಕ ಮಹಿಳಾ ಸಮಾವೇಶ, ಶ್ರೇಷ್ಠ ಸಾಧಕರೊಬ್ಬರಿಗೆ ಅಬ್ಬಕ್ಕ ಸೇವಾ ಪ್ರಶಸ್ತಿ ಪ್ರದಾನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥಿಸಿದರು. ಜೊತೆ ಕಾರ್ಯದರ್ಶಿಗಳಾದ ಸುಮಾ ಪ್ರಸಾದ್ ಸ್ವಾಗತಿಸಿ, ವಿಜಯಲಕ್ಷ್ಮಿ ಕಟೀಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇ ಕಳ ನಿರೂಪಿಸಿದರು. ಪ್ರಮುಖರಾದ ವಾಮನ್ ಬಿ. ಮೈಂದನ್, ಪಿ.ಡಿ.ಶೆಟ್ಟಿ, ಸುವಾಸಿನಿ ಬಬ್ಬು ಕಟ್ಟೆ, ವಿಜಯಲಕ್ಷ್ಮಿ ಬಿ.ಶೆಟ್ಟಿ ಗೀತಾ ಜ್ಯುಡಿತ್ ಸಲ್ದಾನ ಮೊದಲಾದವರು ಉಪಸ್ಥಿತರಿದ್ದರು.

whatsapp image 2023 02 23 at 12.59.23 pm
Sponsors

Related Articles

Back to top button