ಕೊಡಗು, ಸುಳ್ಯ ಭಾಗದಲ್ಲಿ ಭೂಕಂಪನ – ಸರಕಾರ ತಕ್ಷಣವೇ ಸ್ಪಂದಿಸಲು ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹ…

ಸುಳ್ಯ: ಕೊಡಗಿನ ಮತ್ತು ಸುಳ್ಯದ ಆಸುಪಾಸಿನಲ್ಲಿ ,ಸುಬ್ರಮಣ್ಯ – ಭಾಗಮಂಡಲ ಮಧ್ಯೆ ಇರುವ ಹಲವು ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಭೂಕಂಪನ ಅನುಭವ ಆಗಿದ್ದು, ಸರಕಾರ ತಕ್ಷಣವೇ ಭೂಕಂಪ ಪರಿಣಿತರನ್ನು ಹಾಗೂ ವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸುವಂತೆ ಮತ್ತು ಭಯ ಭೀತರಾಗಿರುವ ಜನರಿಗೆ ವಿಶ್ವಾಸ ಮೂಡಿಸುವಂತೆ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.
ಕೊಡಗಿನ ಕೆಲವು ಭಾಗದಲ್ಲಿ ಮೂರು ಬಾರಿ ಭೂಕಂಪನದ ಅನುಭವವಾಗಿದ್ದು, ಸುಳ್ಯ ಪರಿಸರದಲ್ಲಿ ಕಳೆದ 3 ದಿನದಲ್ಲಿ ಎರಡು ಬಾರಿ ಭೂಕಂಪನ ಅನುಭವಾಗಿದೆ. ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬೂಸಾಲಿ ಗೂನಡ್ಕ, ಮಾಜಿ ಸದಸ್ಯ ನಾಗೇಶ್ ಮನೆ ಸಹಿತ ಸಂಪಾಜೆ ಹಾಗೂ ಪರಿಸರ ಗ್ರಾಮಗಳ ಅನೇಕ ಮನೆಗಳು ಹಾನಿಗೀಡಾಗಿದೆ. ಸರಕಾರ ತಕ್ಷಣವೇ ಹಾನಿಗೀಡಾದ ಮನೆಗಳಿಗೆ ಕನಿಷ್ಠ ಒಂದು ಲಕ್ಷ ರೂಪಾಯಿಯನ್ನು ತುರ್ತಾಗಿ ಪರಿಹಾರ ನೀಡುವಂತೆ ಅವರು ವಿನಂತಿಸಿದ್ದಾರೆ.
ದ.ಕ ಜಿಲ್ಲಾಧಿಕಾರಿಗಳಾದ ರಾಜೇಂದ್ರ ಕುಮಾರ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಯವರು ಮತ್ತು ಇತರ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದು, ಕೊಡಗಿನಲ್ಲಿ ಹಾಗೂ ಸುಳ್ಯದ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ನಡೆದಿರುವ ಭೂಕುಸಿತ ಹಾಗೂ ಕಳೆದ ಕೆಲವು ದಿನಗಳಲ್ಲಿ ನಡೆಯುತ್ತಿರುವ ಭೂಕಂಪನದಿಂದ ಜನ ಭಯಬೀತರಾಗಿದ್ದಾರೆ. ಸರಕಾರ ತಕ್ಷಣವೇ ಈ ಭಾಗದ ಜನರಲ್ಲಿ ವಿಶ್ವಾಸ ಹಾಗೂ ಧೈರ್ಯ ತುಂಬುವ ಕೆಲಸವನ್ನು ಮಾಡುವಂತೆ ಹಾಗೂ ಅಗತ್ಯವಿದ್ದಲ್ಲಿ ಹಾನಿಗೊಳಗಾದವರ ವಾಸ್ತವ್ಯಕ್ಕೆ ಬದಲಿ ಸ್ಥಳಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವರಾದ ಅರ್ ಅಶೋಕ್ ರವರಿಗೆ ಟಿ ಎಂ ಶಾಹೀದ್ ತೆಕ್ಕಿಲ್ ಮನವಿ ಮಾಡಿದ್ದಾರೆ.
ವಿಪತ್ತು ನಿರ್ವಹಣಾ ತಂಡವನ್ನು ಈ ಭಾಗದಲ್ಲಿ ನೇಮಿಸಿ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳನ್ನು , ವೈಜ್ಞಾನಿಕ ಮತ್ತು ತಂತ್ರಜ್ಞಾನದ ಉನ್ನತ ತಂಡವನ್ನು ಸ್ಥಳ ಪರಿಶೀಲನೆಗೆ ಕಳುಹಿಸುವಂತೆ ಸರಕಾರವನ್ನು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.

Sponsors

Related Articles

Back to top button