ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳ ಗೌರವಧನ ಹೆಚ್ಚಿಸಲು ಮಂಜುನಾಥ ಭಂಡಾರಿ ಆಗ್ರಹ…

ಬೆಂಗಳೂರು: ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಬೇಕೆಂದು ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು  ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ನಿಯಮ 330ರ ಅಡಿಯಲ್ಲಿ ಆಗ್ರಹಿಸಿದರು.
ಅಧಿವೇಶನದಲ್ಲಿ ಮಾತನಾಡಿದ ಅವರು ‘ಪ್ರಜಾ ಪ್ರಭುತ್ವದಲ್ಲಿ ಗ್ರಾಮ ಪಂಚಾಯತಿಯೇ ತಳಹದಿ. ಆ ತಳಹದಿಯನ್ನು ನಾವು ಬಲಿಷ್ಠವಾಗಿಸಿದರೆ ಮಾತ್ರ ಮಾಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು. ಆದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇಕಡ 50 ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿ ಬರುವುದರಿಂದ ಗೌರವಾನ್ವಿತವಾಗಿ ಬದುಕಲು ಮತ್ತು ಬಡಜನರ ಕಷ್ಟ-ಸುಖಗಳಿಗೆ ಸ್ಪಂದಿಸಲು ಚುನಾಯಿತ ಪ್ರತಿನಿಧಿಗಳೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಠ ಪಕ್ಷ ಮಾಸಿಕ 10 ಸಾವಿರ ರೂಪಾಯಿಗಳವರೆಗೆ ಹೆಚ್ಚಿಸಬೇಕೆಂದು ಅಲ್ಲದೇ ಚುನಾಯಿತ ಪ್ರತಿನಿಧಿಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಆ ಜಿಲ್ಲೆಗಳಲ್ಲಿ ಓಡಾಡಲು ಉಚಿತ ಬಸ್ ಸೌಕರ್ಯವನ್ನು ಹಾಗೂ 5 ವರ್ಷಗಳನ್ನು ಪೂರ್ಣ ಮಾಡಿದ ಚುನಾಯಿತ ಪ್ರತಿನಿಧಿಗಳಿಗೆ ಪಿಂಚಣಿಯನ್ನು ಕೊಡಬೇಕೆಂದು ಆಗ್ರಹಿಸಿದರು.
ನಾನು ಡಾಕ್ಟರೇಟ್ ಪದವಿಯನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಭ್ಯಾಸ ಮಾಡಿರುತ್ತೇನೆ. ಡಾಕ್ಟರೇಟಿನ ಪ್ರಬಂಧ ಮಾಡಲು ಮಾಹಿತಿ ಕಲೆ ಹಾಕುವಾಗ ಸಾವಿರಾರು ಗ್ರಾಮ ಪಂಚಾಯತ್ ಸದಸ್ಯರುಗಳನ್ನು ವಯಕ್ತಿಕವಾಗಿ ಭೇಟಿ ಮಾಡಿ ಅವರು ಪಡುತ್ತಿರುವ ಕಷ್ಟಗಳನ್ನು ಕಣ್ಣಾರೆ ನೋಡಿರುತ್ತೇನೆ ಎಂದ ಮಂಜುನಾಥ ಭಂಡಾರಿಯವರು ಗ್ರಾಮಿಣಾಭಿವೃದ್ಧಿ ಸಚಿವರು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಅನುಷ್ಠಾನಗೊಳಿಸಬೇಕೆಂದು ಹಾಗೂ ಇದಕ್ಕೆ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ಎಲ್ಲಾ 25 ಸದಸ್ಯರ ಬೆಂಬಲ ಇದೆಯೆಂದು ತಿಳಿಸಿದರು.

Sponsors

Related Articles

Back to top button