ತನ್ನಿಂದಾಗಿ ಕೊರೊನಾ ಹರಡಬಾರದೆಂದು ಇಟಲಿಯಲ್ಲೇ ಉಳಿದ ಕನ್ನಡತಿ ಪ್ರತಿಭಾ ಹೆಗ್ಡೆ…

ಇಟಲಿ: ಶಿರಸಿಯ ಯುವತಿಯೊಬ್ಬರು ತನ್ನಿಂದ ಕೊರೊನಾ ವೈರಸ್ ಹರಡಬಾರದು ಎಂದು ಇಟಲಿಯಲ್ಲಿಯೇ ಉಳಿದುಕೊಂಡಿದ್ದಾರೆ.
ಪ್ರತಿಭಾ ಹೆಗ್ಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಕಲ್ಬುರ್ಗಿ, ಮೈಸೂರಿನಲ್ಲಿ ವಿಧ್ಯಾಭ್ಯಾಸ ಮುಗಿಸಿದ ಪ್ರತಿಭಾ ಸದ್ಯ ಇಟಲಿಯಲ್ಲಿ ವಾಸವಾಗಿದ್ದಾರೆ. ಇಟಲಿಯ ನೇಪೆಲ್ಸ್ ನಗರದ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ, ಕೊರೊನಾ ವೈರಸ್ ನಿಂದ ಇಟಲಿ ಭಯಾನಕವಾಗಿದೆ. ಆದರೂ, ಪ್ರತಿಭಾ ಅಲ್ಲಿಯೇ ಉಳಿಯುವ ದೃಢ ನಿರ್ಧಾರ ಮಾಡಿದ್ದಾರೆ.

ಇಟಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ವೈರಸ್ ಹರಡಿದೆ. ಅದೃಷ್ಟವಶಾತ್ ಪ್ರತಿಭಾಗೆ ಇದುವರೆಗೆ ಕೊರೊನಾ ವೈರಸ್ ತಗುಲಿಲ್ಲ. ಆದರೆ, ಇಟಲಿಯಿಂದ ಭಾರತಕ್ಕೆ ಬರುವ ದಾರಿಯಲ್ಲಿ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಆಕಸ್ಮತ್ ತಾನು ಬರುವ ದಾರಿಯಲ್ಲಿ ಕೊರೊನಾ ಸೋಂಕು ತಗುಲಿಸಿಕೊಂಡು, ಅದನ್ನು ಭಾರತಕ್ಕೆ ತಂದರೆ, ತೊಂದರೆ ಹೆಚ್ಚು ಎಂದು ಆಕೆ ಇಟಲಿಯೇ ಇದ್ದಾರೆ.
ತಮ್ಮ‌ ನಿರ್ಧಾರದ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಪ್ರತಿಭಾ ಬರೆದುಕೊಂಡಿದ್ದಾರೆ. “ನಾನು ಇಟಲಿಯ ನೇಪಲ್ಸ್ ನಗರದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡ್ತಾ ಇದ್ದೇನೆ. ಒಂದೆರಡು ವಾರಗಳಿಂದ ಭಾರತದಲ್ಲಿರುವ ನನ್ನ ಸ್ನೇಹಿತರು ಮತ್ತು ಕುಟುಂಬದವರು ಮನೆಗೆ ವಾಪಸ್ ಬಂದು ಬಿಡಬಹುದಲ್ಲ ಅಂತ ಸಲಹೆ ನೀಡುತ್ತಾ ಇದ್ದಾರೆ. ನಾನು ಇಲ್ಲೇ ಇರಲು ಡಿಸೈಡ್ ಮಾಡಿದೆ. ಕಾರಣ ಸಿಂಪಲ್. ನನ್ನ ನಗರದಲ್ಲಿ ಎಷ್ಟೇ ಜನರಿಗೆ COVID-19 ಬಂದಿರಲಿ, ನಾನು ಮನೆಯಲ್ಲೇ ಇದ್ದರೆ ಏನೂ ಸಹ ಆಗುವುದಿಲ್ಲ. ನಾನು ಬದಲಾಗಿ ಭಾರತಕ್ಕೆ ಬರುವ ಹಾದಿಯಲ್ಲಿ ಎಷ್ಟೋ ಜನರ ನಡುವೆ ಇದ್ದು ಸುಮಾರು 15 ಗಂಟೆಗಳ ಪ್ರಯಾಣ ಮಾಡಬೇಕು. ಭಾರತಕ್ಕೆ corona ಹೊತ್ತೊಯ್ಯುವದು ಬಿಟ್ಟರೆ ಬೇರೆ ಯಾವ ಉಪಯೋಗವು ಅದರಲ್ಲಿ ಇಲ್ಲ” ಎಂದಿದ್ದಾರೆ.
“ಈಗ ಪ್ರಸ್ತುತ ಭಾರತದ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜನರೂ ನನ್ನ ಪರಿಸ್ಥಿತಿಯಲ್ಲಿಯೇ ಇದ್ದೀರಿ. ಇದ್ದಲ್ಲೇ ಇರುವುದು ಬಿಟ್ಟು ಬಸ್, ರೈಲು ಹತ್ತಿ ಮನೆಗೆ ಹೋಗೋದ್ರಿಂದ ನಿಮಗೆ corona ತಾಕುವ, ಅಥವಾ ಮೊದಲೇ ಇದ್ದರೆ ಸಹಪ್ರಯಾಣಿಕರಿಗೂ ಕುಟುಂಬದವರಿಗೂ ತಗುಲಿಸುವ ಸಾಧ್ಯತೆಗಳೇ ಹೆಚ್ಚು. ಸರ್ಕಾರ ಬಸ್ ಗಳನ್ನ ಬಂದ್ ಮಾಡಿದರೂ ಕಷ್ಟ ಪಟ್ಟು ಇನ್ಯಾವ್ದೋ ರೀತಿಯಲ್ಲಿ ಮನೆ ಸೇರುವ ಅವಿವೇಕ ತೋರಬೇಡಿ. ದಯವಿಟ್ಟು ಇದ್ದಲ್ಲಿಯೇ ಇರಿ. ಮನೆ ಒಳಗೇ ಇರಿ.” ಎಂದು ಮನವಿ ಮಾಡಿದ್ದಾರೆ.
ತಮ್ಮ ಮನೆಯವರು ಭಾರತಕ್ಕೆ ಬಾ ಎಂದು ಎಷ್ಟೇ ಹೇಳಿದರೂ ತನ್ನಿಂದ ಭಾರತದ ಜನಕ್ಕೆ ಕೊರೊನಾ ವೈರಸ್ ಹರಡಬಾರದು ಎಂದು ಇಟಲಿಯಲ್ಲಿಯೇ ಉಳಿಯುವ ಪ್ರತಿಭಾ ಹೆಗ್ಡೆ ಅವರ ನಿರ್ಧಾರ ಅತ್ಯಂತ ಶ್ಲಾಘನೀಯ.

Sponsors

Related Articles

Leave a Reply

Your email address will not be published. Required fields are marked *

Back to top button