ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – IEEE ದಿನಾಚರಣೆ…

ಪುತ್ತೂರು: ನಾನು, ನನ್ನ ಕೆಲಸ, ನನ್ನ ಕುಟುಂಬ ಎನ್ನುವ ಧೋರಣೆಯಿಂದ ಪ್ರತಿಯೊಬ್ಬರೂ ಮುಕ್ತರಾಗಿ ಸಮಾಜದ ಸಮಸ್ಯೆಗಳಿಗೆ ತನ್ನಿಂದಾದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಡಾ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ IEEE ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬುದ್ಧಿಗೆ ನಿರಂತರವಾಗಿ ಕೆಲಸ ಕೊಡುವ ಕಾರ್ಯ ನಡೆಯಬೇಕು. ಅದಕ್ಕಾಗಿ ಹೊಸತನದ ಹುಡುಕಾಟದಲ್ಲಿ ನಿರತರಾಗಬೇಕು ಓದಿನಿಂದಾಗಲೀ ಅಥವಾ ಸ್ವತಃ ಆವಿಷ್ಕಾರ ಮಾಡುವುದರಿಂದಾಗಲಿ ಇದನ್ನು ಸಾಧಿಸಬೇಕು ಎಂದರು. ಏನಾದರೊಂದು ವಿಶೇಷ ಪ್ರತಿಭೆಯನ್ನು ಬೆಳೆಸಿಕೊಂಡು ಅಂತರ್‍ವಿಭಾಗ ವಿಷಯಗಳ ಬಗ್ಗೆ ಅನ್ವೇಷಣೆ ನಡೆಸಬೇಕೆಂದು ಅವರು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ IEEE ಯಂತಹ ಪ್ರತಿಷ್ಟಿತ ಸಂಸ್ಥೆಯಲ್ಲಿ ಸದಸ್ಯತ್ವವನ್ನು ಪಡೆಯುವುದು ಒಂದು ಹೆಮ್ಮೆಯ ವಿಚಾರ. ಅಲ್ಲಿರಬಹುದಾದ ನೂತನ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ತಮ್ಮಲ್ಲಿರುವ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಹೇಳಿದರು. ಹೊಸತನದ ಹುಡುಕಾಟದಲ್ಲಿ ನಿರತರಾಗುವ ವಿದ್ಯಾರ್ಥಿಗಳಿಗೆ ಕಾಲೇಜು ನಿರಂತರ ಪ್ರೋತ್ಸಾಹವನ್ನು ನೀಡುತ್ತದೆ ಎಂದವರು ಹೇಳಿದರು.
IEEE ವಿಸಿಇಟಿ ವಿಭಾಗದ ಸಂಯೋಜಕಿ ಡಾ.ಜೀವಿತಾ.ಬಿ.ಕೆ, ಸಹ ಸಂಯೋಜಕಿ ಪ್ರೊ.ರಜನಿ.ರೈ ವಿದ್ಯಾರ್ಥಿ ಸಂಯೋಜಕಿ ದಿವ್ಯಶ್ರೀ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
IEEE ದಿನಾಚರಣೆ ಪ್ರಯುಕ್ತ ವಾರವಿಡೀ ವಿಚಾರ ಸಂಕಿರಣಗಳನ್ನು, ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಡಾ.ಜೀವಿತಾ.ಬಿ.ಕೆ ವಾರ್ಷಿಕ ವರದಿಯನ್ನು ಮಂಡಿಸಿದರು. ಗೌತಮ್ ಶಂಕರ್ ಸ್ವಾಗತಿಸಿ, ದಿವ್ಯಶ್ರೀ ವಂದಿಸಿದರು. ವರುಣ್ ರೈ ಮತ್ತು ವಿಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button