ಕೊಲ್ಯದಲ್ಲಿ ಶನೈಶ್ಚರ ಪೂಜೆ – ಶನಿ ಕಥಾ ಪ್ರವಚನ…
ಧಾರ್ಮಿಕ ವಿಧಿಯಿಂದ ಗ್ರಹದೋಷ ನಿವಾರಣೆ: ಭಾಸ್ಕರ ರೈ ಕುಕ್ಕುವಳ್ಳಿ…
![20230107 103309](wp-content/uploads/2023/01/20230107_103309-780x470.jpg)
ಮಂಗಳೂರು: ‘ಮನುಷ್ಯನ ಜನ್ಮ ಕುಂಡಲಿಯಲ್ಲಿ ಕಾಣಿಸುವ ಗ್ರಹದೋಷಾದಿಗಳನ್ನು ಧಾರ್ಮಿಕ ಪೂಜಾ ವಿಧಿಯಿಂದ ಪರಿಹರಿಸಿಕೊಳ್ಳುವ ಮಾರ್ಗಗಳಿವೆ. ಕೆಳಗೆ ಬಿದ್ದವನು ನೆಲವನ್ನೇ ಆಧರಿಸಿ ಏಳುವಂತೆ ಶನಿ ದೋಷದಿಂದ ಪೀಡಿತರಾದವರು ಶನಿ ಪೂಜೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಲಿಯುಗದಲ್ಲಿ ಶ್ರೀ ಶನೈಶ್ಚರ ಸ್ವಾಮಿ ಶೀಘ್ರ ಫಲ ಕೊಡುವ ಶ್ರೇಷ್ಠ ಗ್ರಹ’ ಎಂದು ಯಕ್ಷಗಾನ ಅರ್ಥದಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಸೋಮೇಶ್ವರ ಗ್ರಾಮದ ಕೊಲ್ಯ ಸಾರಸ್ವತ ಕೊಲೊನಿಯಲ್ಲಿ ಉದ್ಯಮಿ ಸೌಂದರ್ಯ ರಮೇಶ್ ಮತ್ತು ಕುಟುಂಬಸ್ಥರು ಏರ್ಪಡಿಸಿದ್ದ ಶನೈಶ್ಚರ ಪೂಜಾ ಸೇವೆಯಲ್ಲಿ ‘ಶ್ರೀ ಶನೈಶ್ಚರ ಮಹಾತ್ಮೆ’ ಕಥಾ ಪ್ರವಚನ ನೀಡಿ ಅವರು ಮಾತನಾಡಿದರು. ಕೀರ್ತನಕಾರ ತೋನ್ಸೆ ಪುಷ್ಕಳ ಕುಮಾರ್ ಶನಿ ಪುರಾಣವನ್ನು ವಾಚಿಸಿದರು. ಮುರಳಿ ಭಟ್ ಕಟೀಲು ಪೂಜಾ ವಿಧಿಗಳನ್ನು ನೆರವೇರಿಸಿದರು.
ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸೌಂದರ್ಯ ರಮೇಶ್ ಮತ್ತು ದೇವಿಕಾ ದಂಪತಿ ಸ್ವಾಗತಿಸಿ ಪ್ರವಚನಕಾರರನ್ನು ಗೌರವಿಸಿದರು. ಕಾಸರಗೋಡಿನ ಜ್ಯೋತಿಷಿ ಅನಂತಕೃಷ್ಣ ಶರ್ಮ, ಭರತ್ ಸೌಂದರ್ಯ, ಡಾ. ಶ್ರೀನಿವಾಸ್ ಮತ್ತು ಡಾ.ಚೈತ್ರ ಉಪಸ್ಥಿತರಿದ್ದರು.
![20230107 103241](wp-content/uploads/2023/01/20230107_103241-300x212.jpg)