ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ…

ಪುತ್ತೂರು: ಪ್ರತಿಯೊಬ್ಬನೂ ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಅಥವಾ ಉದ್ಯಮಿಯಾಗಲು ವಿದ್ಯಾರ್ಥಿ ದೆಸೆಯಿಂದಲೇ ಸರಿಯಾದ ವರ್ತನೆ, ಸಾಮಾನ್ಯ ಜ್ಞಾನ ಹಾಗೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಆವಶ್ಯಕ ಎಂದು ಖ್ಯಾತ ಸ್ವರ್ಣೋದ್ಯಮಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ನಿರ್ದೇಶಕ ಬಲರಾಮ ಆಚಾರ್ಯ.ಜಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದರು. ಜೀವನದಲ್ಲಿ ಎಡರು ತೊಡರುಗಳು ಸಾಮಾನ್ಯ, ಆದರೆ ಅದನ್ನು ಸಮರ್ಥವಾಗಿ ಎದುರಿಸಿ ಅದರಿಂದ ಜೀವನಾನುಭವವನ್ನು ಗಳಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ವಿದ್ಯಾರ್ಥಿಗಳ ಶಿಸ್ತುಬದ್ದ ಜೀವನ ಮತ್ತು ನಿರ್ದಿಷ್ಟ ಗುರಿಯುಳ್ಳ ಕಲಿಕೆಯು ಅವನ ಮುಂದಿನ ಜೀವನದ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು. ಸಾಮಾಜಿಕ ಜಾಲತಾಣಗಳ ಬಳಕೆಯು ಮಿತವಾಗಿರಬೇಕು ಮತ್ತು ಅದು ಸಮಾಜದ ಉನ್ನತಿಗೆ ಉಪಯೋಗವಾಗುವಂತಿರಬೇಕು ಎಂದರು. ಈ ಸಂಸ್ಥೆಯಲ್ಲಿ ಶೈಕ್ಷಣಿಕ ಆವಶ್ಯಕತೆಗಳನ್ನು ಪೂರೈಸುವುದರ ಜತೆಯಲ್ಲಿ ಜೀವನ ಮೌಲ್ಯಗಳನ್ನು ತಿಳಿಸಲಾಗುತ್ತದೆ ಇದನ್ನು ಬಳಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ ಎಂದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ .ಕೆ ಮಾತನಾಡಿ ವಿದ್ಯಾರ್ಥಿಗಳಿಗೆ ಆವಶ್ಯಕವಾದ ಎಲ್ಲಾ ಸವಲತ್ತುಗಳನ್ನು ಕಾಲೇಜು ಒದಗಿಸುತ್ತದೆ. ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶವನ್ನು ನೀಡಲಾಗುತ್ತದೆ. ಇವೆಲ್ಲವನ್ನೂ ಬಳಸಿಕೊಂಡು ನಿರ್ಧಿಷ್ಟವಾದ ಗುರಿಯೊಂದಿಗೆ ಯಶಸ್ಸನ್ನು ಗಳಿಸಿಕೊಳ್ಳಿ ಎಂದರು.
ಶೈಕ್ಷಣಿಕವಾಗಿ ಮತ್ತು ಕ್ರೀಡಾ ವಿಭಾಗದಲ್ಲಿ ಉನ್ನತ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ಕಾಲೇಜಿನ ಬಗ್ಗೆ ಹಾಗೂ ಎಂಬಿಎ ಕೋರ್ಸಿನ ಬಗ್ಗೆ ಮಾಹಿತಿ ನೀಡಿದರು. ಡಾ.ರೋಬಿನ್ ಶಿಂಧೆ ಸ್ವಾಗತಿಸಿ, ಪ್ರೊ..ರಾಕೇಶ್ ಎಂ ವಂದಿಸಿದರು. ವಿದ್ಯಾರ್ಥಿನಿ ಚೊಂದಮ್ಮ ಕಾರ್ಯಕ್ರಮ ನಿರ್ವಹಿಸಿದರು.

mba2

mba
Sponsors

Related Articles

Back to top button