ಸರಳ ಬದುಕು, ಉನ್ನತ ಮೌಲ್ಯಗಳೇ ಬದುಕಿಗೆ ದಾರಿದೀಪ – ಡಾ. ನಾ. ಮೊಗಸಾಲೆ…..

ಪುತ್ತೂರು: ಸರಳವಾದ ಬದುಕನ್ನು ತೀವ್ರವಾಗಿ ಪ್ರೀತಿಸುವ ಮನೋಸ್ಥಿತಿ ಮತ್ತು ಒಪ್ಪಿಕೊಂಡ ಮೌಲ್ಯಗಳಿಗೆ ಬದ್ಧವಾದ ನಡೆ ನುಡಿ ಇವಿಷ್ಟೇ ಸಾರ್ಥಕ ಬದುಕಿನ ಲಕ್ಷಣವಾಗಿದ್ದು, ನಮ್ಮ ಹಿರಿಯ ಕವಿಗಳಾದ ಮಾಸ್ತಿ, ಬೇಂದ್ರೆ, ಡಿವಿಜಿ ಇವರೆಲ್ಲ ಈ ದಾರಿಯಲ್ಲೇ ನಡೆದವರು. ಅವರ ಮಾದರಿಗಳೇ ನಮಗೆ ದಾರಿದೀಪವಾಗಬೇಕು ಹೊರತು ಆಧುನಿಕತೆಯ ಹೆಸರಿನ ಹೊರಲೋಕದ ಬೆಡಗುಗಳಲ್ಲ ಎಂದು ಕವಿ, ಕಾದಂಬರಿಕಾರ ಡಾ. ನಾ. ಮೊಗಸಾಲೆ ಹೇಳಿದರು.
ಅವರು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗ ಮತ್ತು ಮೊಗಸಾಲೆ ಎಪ್ಪತ್ತೈದು ಅಭಿನಂದನ ಸಮಿತಿಯ ಸಹಯೋಗದಲ್ಲಿ ಮಂಗಳವಾರ ಕಾಲೇಜ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ. ನಾ. ಮೊಗಸಾಲೆಯವರ ಆತ್ಮಕಥೆ `ಬಯಲಬೆಟ್ಟ’ದ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ತಾಳ್ತಜೆ ವಸಂತಕುಮಾರ ಅವರು ಓದುಗನ ಭಾವಲೋಕವನ್ನು ಸ್ಪರ್ಶಿಸುವ ಕೃತಿಯಲ್ಲಿನ ಹಲವಾರು ಘಟನೆಗಳನ್ನು ಉದ್ಧರಿಸಿ ಮೊಗಸಾಲೆಯವರ ಕಥನ ರೂಪದ ಈ ಕೃತಿಯು ಹೇಗೆ ಒಂದು ನಾಡಿನ, ಒಂದು ಕಾಲದ ಸಾಂಸ್ಕøತಿಕ ದಾಖಲೆಯಾಗುತ್ತದೆ ಎಂದರು.
ಕಾಲೇಜ್‍ನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಮೊಗಸಾಲೆ ಅಭಿನಂದನ ಸಮಿತಿಯ ವತಿಯಿಂದ ಹಾಗೂ ವೈದ್ಯ ಡಾ. ಎ.ಪಿ ಭಟ್ ಅವರು ಗ್ರಂಥಾಲಯಕ್ಕೆ ನೀಡಿದ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ವಿ.ಬಿ. ಅರ್ತಿಕಜೆ, ನಂದಳಿಕೆ ಬಾಲಚಂದ್ರರಾವ್, ವಿಠಲ ಬೇಲಾಡಿ, ಸದಾನಂದ ನಾರಾವಿ, ಸತೀಶಕುಮಾರ ಕೆಮ್ಮಣ್ಣು, ರವಿಶಂಕರ ಜಿ.ಕೆ., ಸರೋಜಿನಿ ನಾಗಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.
ಡಾ. ಮೊಗಸಾಲೆ ಅಭಿನಂದನ ಸಮಿತಿಯ ಕಾರ್ಯಾಧ್ಯಕ್ಷ ಡಾ. ಬಿ. ಜನಾರ್ದನ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಧರಮೂರ್ತಿ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಹರಿಪ್ರಸಾದ್ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button