ಸಾನಿಧ್ಯ ಶಾಲೆಯಲ್ಲಿ ಕಲಾ ಸೌರಭದಿಂದ ‘ಅಮೃತ ಸೌರಭ’ ಕಾರ್ಯಕ್ರಮ…

ಕಲಾ ಸೌರಭದ ಕಲಾಸೇವೆ ಅನುಪಮ: ಚಂದ್ರಶೇಖರ್ ಬೆಲ್ಚಡ...

ಮಂಗಳೂರು: ‘ದಕ್ಷಿಣ ಕನ್ನಡ ದ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಮಾನವೀಯ ಸೇವೆಯಲ್ಲಿ ಜಗ ಮೆಚ್ಚುವ ಕೆಲಸ ಮಾಡುತ್ತಿದೆ. ಬುದ್ದಿ ವಿಕಸಿತದಲ್ಲಿರದ ಮನಸ್ಸುಗಳನ್ನು ಒಗ್ಗೂಡಿಸಿ ಅವರ ಮಾನಸಿಕ ವಿಕಾಸಕ್ಕೆ ಬೇಕಾದ ಎಲ್ಲ ಪ್ರಯತ್ನ ಇಲ್ಲಿ ಯಶಸ್ವಿಯಾಗಿ ನಡೆದಿದೆ‌. ಮುಂಬಯಿಯ ಹೆಸರಾಂತ ಸಾಂಸ್ಕೃತಿಕ ಹಾಗೂ ಸಮಾಜ ಸೇವಾ ಸಂಸ್ಥೆ ಕಲಾ ಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಅವರ ನೇತೃತ್ವದಲ್ಲಿ ಸಾನಿಧ್ಯದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ವೈವಿಧ್ಯ ಮುಗ್ಧ ಮಕ್ಕಳಿಗೆ ಮುದ ನೀಡುವ ಅರ್ಥಪೂರ್ಣ ಕಾರ್ಯಕ್ರಮ’ ಎಂದು ಮುಂಬೈ ಉದ್ಯಮಿ ಚಂದ್ರಶೇಖರ ಬೆಲ್ಚಡ ಹೇಳಿದ್ದಾರೆ.
ಅವರು ಜೂನ್ 22ರಂದು ಮಂಗಳೂರು ಸಮೀಪ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಕಲಾ ಸೌರಭದ ಮೂವತ್ತನೇ ವರ್ಷಾಚರಣೆ ಮತ್ತು ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾದ ‘ಅಮೃತ ಸೌರಭ’ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಮೃತ ಪುತ್ರರು: ಕುಕ್ಕುವಳ್ಳಿ
ಕರ್ನಾಟಕ ಯಕ್ಷಗಾನ, ಜಾನಪದ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯಮತ್ತು ಕಲಾಸೌರಭದ ಸಲಹೆಗಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ಅಮೃತ ನುಡಿ’ ದಿಕ್ಸೂಚಿ ಭಾಷಣ ಮಾಡುತ್ತಾ ‘ ಸಮಾಜದ ಮುಖ್ಯ ವಾಹಿನಿಯಿಂದ ದೂರವಿರುವ ಭಿನ್ನ ಸಾಮರ್ಥ್ಯದ ಮಕ್ಕಳು ವಾಸ್ತವವಾಗಿ ಅಮೃತ ಪುತ್ರರು. ವಿಶೇಷ ಚೇತನ ಮಕ್ಕಳೂ ಸೇರಿದಂತೆ ಎಳೆಯರಲ್ಲಿ ರಾಷ್ಟ್ರ ಜಾಗೃತಿ ಮೂಡಿಸುವ ಕೆಲಸ ವಿದ್ಯಾ ಸಂಸ್ಥೆಗಳಲ್ಲಿ ನಿರಂತರ ನಡೆಯಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ದೇಶದ ಭವ್ಯ ಪರಂಪರೆ, ಇತಿಹಾಸ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಅರಿತು ಭವಿಷ್ಯದ ಭಾರತವನ್ನು ಕಟ್ಟುವ ಸಂಕಲ್ಪಕ್ಕೆ ನಾವೆಲ್ಲ ಬದ್ಧರಾಗೋಣ’ ಎಂದು ಕರೆ ನೀಡಿದರು.
‘ರಾಷ್ಟ್ರ ಜೀವನದಲ್ಲಿ ಎಪ್ಪತ್ತೈದು ವರ್ಷ ಎಂಬುದು ದೊಡ್ಡದಲ್ಲ. ಆದರೆ ನಮ್ಮ ನೆಲ, ಜಲ, ಸಂಸ್ಕೃತಿ ಸಹಸ್ರಕಾಲ ಮತ್ತಷ್ಟು ಮೈದುಂಬಿ ಮೆರೆಯುವಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರೇರಣೆಯಾಗಲಿ’ ಎಂದವರು ನುಡಿದರು. ಸವಿತಾ ಸಮಾಜ ಮಂಗಳೂರು ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಮತ್ತು ಮಧು ಸಮೂಹ ಸಂಸ್ಥೆಗಳ ಮಾಲಕ ಮಧುಸೂದನ್ ಅಯ್ಯರ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ವರ್ತನೆಗಳ‌ ಪರಿವರ್ತನೆ:
ಸಾನ್ನಿಧ್ಯ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಮಾತನಾಡಿ ‘ ‘ ಮಕ್ಕಳಿಗೆ ಮನೋಲ್ಲಾಸ ನೀಡುವ ಸಂಗೀತ-ನೃತ್ಯ ಬೇಕಾಗಿದೆ. ಇದರಿಂದ ಮನಸ್ಸಿನ ಸ್ಥಿರತೆ ಸಾಧ್ಯ. ಸಾನಿಧ್ಯದ ಮುಗ್ಧ ಮಕ್ಕಳ ವಿಕಸನದ ಧ್ಯೇಯ ವಾಕ್ಯ “ವರ್ತನೆಗಳ ಪರಿವರ್ತನೆ” ; ಕಲಾಸೌರಭದ ಕಾರ್ಯಕ್ರಮ ಇದಕ್ಕೆ ಪೂರಕವಾದುದು’ ಎಂದು ನುಡಿದು ಕಲಾವಿದರನ್ನು ಗೌರವಿಸಿದರು. ವೇದಿಕೆಯಲ್ಲಿ ಸಾನಿಧ್ಯ ಸಂಸ್ಥೆಯ ಗೌ. ಪ್ರ. ಕಾರ್ಯದರ್ಶಿ, ಕಾರ್ಪೊರೇಟರ್ ಜಗದೀಶ ಶೆಟ್ಟಿ, ಉಡುಪಿ ವಲಯದ ಉದ್ಯಮಿ ಸಮಾಜ ಸೇವಕ ಉಮೇಶ್ ಕಲ್ಬಾವಿ, ಕಲಾ ಸೌರಭದ ನಿರ್ದೇಶಕ ಶೇಖರ್ ಸಸಿಹಿತ್ಲು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಮತ್ತು ಶಿಕ್ಷಕರಿಂದ ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯ ಜರಗುತು. ಕಲಾಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಸ್ವಾಗತಿಸಿ ಅಮೃತ ಸೌರಭ ಸರಣಿ ಕಾರ್ಯಕ್ರಮದ ಬಗೆಗಿನ ಮಾಹಿತಿ ಯನ್ನು ನೀಡಿದರು.ನಾಟಕಕಾರ ಮತ್ತು ರಂಗ ನಿರ್ದೇಶಕ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು ಪ್ರಸ್ತಾವನೆಗೈದರು.ಗಾಯಕ ಪುಷ್ಕಳ್ ಕುಮಾರ್ ತೋನ್ಸೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಸಂಗೀತ ಸೌರಭ:
ಕಾರ್ಯಕ್ರಮದ ಅಂಗವಾಗಿ ಸಂಗೀತ ಕ್ಷೇತ್ರದ ಪ್ರಸಿದ್ದ ಕಲಾವಿದರಾದ ತೋನ್ಸೆ ಪುಷ್ಕಳ ಕುಮಾರ್, ರವೀಂದ್ರ ಪ್ರಭು, ಮಾಲಿನಿ ಕೇಶವಪ್ರಸಾದ್, ರಮೇಶ್ ಸಾಲಿಯಾನ್, ಜಗದೀಶ ಶೆಟ್ಟಿ ಮತ್ತು ಸಾನ್ನಿಧ್ಯದ ಮಕ್ಕಳು ಸಂಗೀತ ಕಾರ್ಯಕ್ರಮ ನೀಡಿದರು. ಸತೀಶ್ ಸುರತ್ಕಲ್, ರಾಜೇಶ್ ಭಾಗವತ್ ಮೊದಲಾದವರು ಹಿನ್ನೆಲೆ ವಾದ್ಯಗಳಲ್ಲಿ ಸಹಕರಿಸಿದರು.

 

Sponsors

Related Articles

Back to top button