ಬಂಟ್ವಾಳ – ಶಾಸಕರಿಂದ ಸಾರ್ವಜನಿಕ ಅಹವಾಲು ಸ್ವೀಕಾರ…

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅ.25 ರಂದು ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಅರ್ಜಿಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು, ಅರ್ಜಿ ವಿಲೇವಾರಿಯ ಕುರಿತು ಯಾರೂ ಕೂಡ ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಅಹವಾಲು ಸ್ವೀಕಾರದ ಸಂದರ್ಭದಲ್ಲಿ ಬಂದ ಪ್ರತಿ ಅರ್ಜಿಗಳ ಕುರಿತು ಗಮನ ಹರಿಸಿದ ಶಾಸಕರು, ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರ ಸಮ್ಮುಖದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಒಟ್ಟು 92 ಅರ್ಜಿಗಳ ಸಲ್ಲಿಕೆಯಾಗಿದ್ದು, ಎಲ್ಲದಕ್ಕೂ ಶಾಸಕರು ಗಮನ ಹರಿಸಿದ್ದರು.
ಸಜೀಪಮೂಡ ಕೊಳಕೆಯಲ್ಲಿ ತೋಡಿಗೆ ಮೋರಿ ಹಾಕಿ ರಸ್ತೆ ನಿರ್ಮಿಸಲು ಅಡ್ಡಿಯಾಗುತ್ತಿರುವ ಕುರಿತು ಮಹಿಳೆಯೊಬ್ಬರು ತಿಳಿಸಿದಾಗ, ತಾ.ಪಂ.ಇಒ ಅವರನ್ನು ಸಂಪರ್ಕಿಸಿದ ಶಾಸಕರು ಶೀಘ್ರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರು ಸರ್ವೇ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ಪುರಸಭಾ ಸದಸ್ಯರಾದ ಗೋವಿಂದ ಪ್ರಭು ಹಾಗೂ ಹರಿಪ್ರಸಾದ್ ಅವರು ವಸತಿ ರಹಿತರ ನಿವೇಶನದ ಅರ್ಜಿ ಸರ್ವೇ ಇಲಾಖೆಯಲ್ಲಿ ವಿಳಂಬವಾಗುತ್ತಿರುವ ಕುರಿತು ತಿಳಿಸಿದಾಗ, ಶೀಘ್ರ ಸರ್ವೇ ಮಾಡುವಂತೆ ಶಾಸಕರು ಸೂಚಿಸಿದರು.
ದೈವಸ್ಥಳ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ನಿವೇಶನಕ್ಕಾಗಿ ಕುರಿತು ಸರಪಾಡಿ ಗ್ರಾ.ಪಂ.ಸದಸ್ಯ ರಾಮಕೃಷ್ಣ ಮಯ್ಯ ಅವರು ಅರ್ಜಿ ನೀಡಿದ್ದು, ಅದರ ಕುರಿತು ಕ್ರಮಕೈಗೊಳ್ಳಲು ಶಾಸಕರು ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಸೂಚಿಸಿದರು.
ನರಿಕೊಂಬು ಗ್ರಾಮದ ವ್ಯಕ್ತಿಯೊಬ್ಬರ ಮನೆಗೆ ಹಾನಿಯಾಗಿರುವ ಕುರಿತು 45 ಸಾವಿರ ರೂ. ಮಂಜೂರಾಗಿದ್ದು, ಆದರೆ ಹೆಚ್ಚಿನ ಹಾನಿ ಸಂಭವಿಸಿರುವ ಕುರಿತು ಶಾಸಕರ ಗಮನಕ್ಕೆ ಬಂದಾಗ ಅದನ್ನು ತಹಶೀಲ್ದಾರ್ ಅವರಿಗೆ ತಿಳಿಸಿ, ಹಾನಿಗೊಳಗಾದ ಮನೆಯವರಿಗೆ ಸ್ಥಳದಲ್ಲೇ 95 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು. ಜತೆಗೆ ತಿರಸ್ಕೃತಗೊಂಡಿದ್ದ 95ಸಿ ಅರ್ಜಿಯನ್ನು ಮರುಪರಿಶೀಲನೆ ನಡೆಸಿ ಕಾಮಾಜೆಯ ಸುಧಾ ಅವರಿಗೆ ಹಕ್ಕುಪತ್ರ ವಿತರಿಸಲಾಯಿತು.
ನರಿಕೊಂಬು ನಿವಾಸಿಯೊಬ್ಬರು ಮುಂಬಯಿಯಲ್ಲಿ ಕೋವಿಡ್ ಪಾಸಿಟಿವ್ ಬಂದು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದು, ಪರಿಹಾರದ ಕುರಿತು ಶಾಸಕರ ಗಮನಕ್ಕೆ ಬಂದಾಗ, ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಸೂಚಿಸಿದರು. ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಹಶೀಲ್ದಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಾಜಿ ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಕಮಲಾಕ್ಷಿ ಕೆ.ಪೂಜಾರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಮನಾಥ ರಾಯಿ, ಹಿಂದುಳಿದ ವರ್ಗ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಪ್ರಮುಖರಾದ ರಂಜಿತ್ ಮೈರ, ವಿಶ್ವನಾಥ್ ಚಂಡ್ತಿಮಾರ್, ಪ್ರಣಾಮ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.
ತಾಲೂಕು ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಕವಿತಾ, ಉಪತಹಶೀಲ್ದಾರ್‌ಗಳಾದ ನರೇಂದ್ರನಾಥ್ ಭಟ್, ದಿವಾಕರ ಮುಗುಳಿಯ, ನವೀನ್ ಬೆಂಜನಪದವು, ವಿಜಯವಿಕ್ರಮ, ರಾಜೇಶ್, ಕಂದಾಯ ನಿರೀಕ್ಷಕರಾದ ಧರ್ಮಸಾಮ್ರಾಜ್ಯ, ಕುಮಾರ್, ಮಂಜುನಾಥ್, ಪ್ರಥಮ ದರ್ಜೆ ಸಹಾಯಕ ಸೀತಾರಾಮ್ ಅವರು ಅರ್ಜಿಗಳ ಕುರಿತು ಶಾಸಕರ ಸಮ್ಮುಖದಲ್ಲಿ ಸಾರ್ವಜನಿಕರಿಗೆ ಉತ್ತರ ನೀಡಿದರು.

Sponsors

Related Articles

Back to top button