ಬೊಂಡಾಲ ಯಕ್ಷೋತ್ಸವದಲ್ಲಿ ಸಾಧಕ ಸನ್ಮಾನ – ಪ್ರಶಸ್ತಿ ಪ್ರದಾನ…

ಮಂಗಳೂರು: ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ಆಶ್ರಯದಲ್ಲಿ 2024 ಫೆಬ್ರವರಿ 14 ರಿಂದ 16 ರವರೆಗೆ ಮೂರು ದಿನ ನಡೆಯುವ ಶ್ರೀ ಕಟೀಲು ಮೇಳದ ‘ಯಕ್ಷಗಾನ ಬಯಲಾಟ ಸುವರ್ಣ ಸಂಭ್ರಮ’ದಲ್ಲಿ ಸಾಧಕ ಕಲಾವಿದರಿಗೆ ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.
ಅಲ್ಲದೆ ಬೊಂಡಾಲ ಯಕ್ಷೋತ್ಸವದ ವಿಶೇಷ ಕಾರ್ಯಕ್ರಮವಾಗಿ ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾಲಿಗ್ರಾಮ ಸಹಿತ ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆಯವರನ್ನು ಸುವರ್ಣೋತ್ಸವ ಸನ್ಮಾನ ನೀಡಿ ಗೌರವಿಸಲಾಗುವುದು ಎಂದು ಬಯಲಾಟ ಸೇವಾ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದ್ದಾರೆ.

ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ:

whatsapp image 2024 01 20 at 7.46.52 pm

ಕಲ್ಲಾಡಿ ಮನೆತನದ ಹಿರಿಯರಾದ ಕಲ್ಲಾಡಿ ದಿ| ಕೊರಗ ಶೆಟ್ಟಿ ಮತ್ತು ದಿ| ವಿಠಲ ಶೆಟ್ಟಿಯವರ ಯಜಮಾನಿಕೆಯಲ್ಲಿ 1937ರಿಂದ 2005ರವರೆಗೆ ತಿರುಗಾಟ ನಡೆಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕತ್ವವನ್ನು 2005 ರಿಂದ ಸಮಗ್ರವಾಗಿ ನಿರ್ವಹಿಸಿಕೊಂಡು ಬರುತ್ತಿರುವವರು ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ. ತಂದೆಯವರ ಬಳಿಕ ಕರ್ನಾಟಕ ಮೇಳವನ್ನು ಮುನ್ನಡೆಸಿದ ಅವರು ಅದು ಸ್ಥಗಿತಗೊಂಡ ಬಳಿಕ ನಾಲ್ಕಾಗಿದ್ದ ಕಟೀಲು ಮೇಳವನ್ನು ಆರಕ್ಕೇರಿಸಿದರು. ಕಲ್ಲಾಡಿ ಮನೆತನದ ಮೂರನೇ ತಲೆಮಾರಿನ ಪ್ರತಿನಿಧಿಯಾಗಿ ಅವರನ್ನು ಸೇವಾಕರ್ತರು ಆದರದಿಂದ ‘ಕೊರಗಣ್ಣ’ ಎಂದೇ ಕರೆಯುತ್ತಾರೆ.
ಶ್ರೀ ಕಟೀಲು ಕ್ಷೇತ್ರದ ಭಕ್ತರು ಮತ್ತು ಹಿತೈಷಿಗಳ ಸಹಕಾರದಿಂದ ಕಲಾವಿದರ ಸಂಚಾರಕ್ಕೆ ಬಸ್ಸಿನ ವ್ಯವಸ್ಥೆ, ಪರಿಕರಗಳ ಸಾಗಣಿಕೆಗೆ ಲಾರಿಗಳು, ಸೇವಾಕರ್ತರ ಅನುಕೂಲಕ್ಕಾಗಿ ಸಿದ್ಧರಂಗಸ್ಥಳ, ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆಗಳನ್ನು ಮೇಳದಲ್ಲಿಯೇ ಮಾಡಿಕೊಟ್ಟಿದ್ದಾರೆ. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ 2015 ರಲ್ಲಿ ದೇವಳದ ಬ್ರಹ್ಮಕಲಶೋತ್ಸವವನ್ನು ಅದ್ದೂರಿಯಾಗಿ ನಡೆಸಿರುವ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

ಪಳ್ಳಿ ಕಿಶನ್ ಹೆಗ್ಡೆ:

whatsapp image 2024 01 20 at 7.47.12 pm

ಎಲ್ಲಾ ಮೇಳಗಳಲ್ಲಿ ಅರ್ಧಚಂದ್ರಾಕೃತಿಯ ರಂಗಮಂಟಪ, ವರ್ಷಂಪ್ರತಿ ಕರ್ನಾಟಕದಾದ್ಯಂತ 1000ಕ್ಕೂ ಮಿಕ್ಕಿ ಪ್ರದರ್ಶನ, ತೆಂಕು – ಬಡಗು ತಿಟ್ಟುಗಳ ಏಕಕಾಲದ ಪ್ರದರ್ಶನ, ಮಳೆಗಾಲದ ಆಟ, ಜೋಡಾಟ – ಕೂಡಾಟಗಳ ಆಯೋಜನೆ.. ಇತ್ಯಾದಿ ಅವರ ಸಾಧನೆ. ಕೋವಿಡ್ ಸಂದರ್ಭ 1000ಕ್ಕೂ ಮಿಕ್ಕಿ ಕಲಾವಿದರಿಗೆ ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ; ಸೋಮನಾಥ ಯಕ್ಷಕಲಾ ಗಂಗೋತ್ರಿ ಟ್ರಸ್ಟ್ ಸ್ಥಾಪಿಸಿ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಪ್ರಶಸ್ತಿ , ನಿಧಿ ಸಮರ್ಪಣೆ .. ಮೊದಲಾದುವು ಅವರ ಸೇವಾ ಕಾರ್ಯಗಳು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾಗಿ, ಉಡುಪಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾಗಿ, ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ – 2023 ಇದರ ಉಪಾಧ್ಯಕ್ಷರಾಗಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಮತ್ತು ರಂಗಸ್ಥಳ ಸಾಂಸ್ಕೃತಿಕ ಸಂಶೋಧನಾ ಟ್ರಸ್ಟ್ ಅಧ್ಯಕ್ಷರಾಗಿ ಸಾರ್ವಜನಿಕ ರಂಗದಲ್ಲಿ ದುಡಿದಿರುವ ಪಿ.ಕಿಶನ್ ಹೆಗ್ಡೆಯವರು ಯಕ್ಷಗಾನದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ ಸಾಹಸಿ.

ಅಮ್ಮುಂಜೆ ಮೋಹನ್ ಅವರಿಗೆ ಬೊಂಡಾಲ ಪ್ರಶಸ್ತಿ – 2024:

whatsapp image 2024 01 20 at 7.47.37 pm

ಸಾಧಕರ ಸನ್ಮಾನದ ಜೊತೆಗೆ ದಿ|ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ| ರಾಮಣ್ಣ ಶೆಟ್ಟಿ ಸಂಸ್ಮರಣಾರ್ಥ ಪ್ರತಿ ವರ್ಷ ನೀಡುವ ‘ಬೊಂಡಾಲ ಪ್ರಶಸ್ತಿ’ಯನ್ನೂ ಸುವರ್ಣ ಸಂಭ್ರಮದ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಚಾಲಕತ್ವದ ಆಯ್ಕೆ ಸಮಿತಿಯು ಈ ಬಾರಿ ಕಟೀಲು ಮೇಳದಲ್ಲಿ 29 ವರ್ಷಗಳ ತಿರುಗಾಟ ಮಾಡಿದ ಪ್ರಬುದ್ಧ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಅವರನ್ನು ಆಯ್ಕೆ ಮಾಡಿದೆ.
ಬಟ್ಲಬೆಟ್ಟು ಅಮ್ಮುಂಜೆಯ ದಿ| ವೆಂಕಪ್ಪ ಬೆಳ್ಚಡ ಮತ್ತು ದಿ| ಸುಶೀಲಾ ದಂಪತಿಗೆ 1973 ಜುಲೈ 4ರಂದು ಜನಿಸಿದ ಮೋಹನ್ ಕುಮಾರ್ ಎಸ್.ಎಸ್.ಎಲ್.ಸಿ. ವರೆಗೆ ಓದಿದ್ದಾರೆ. ಗುಂಡಿಲಗುತ್ತು ಶಂಕರ ಶೆಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಕಲಿತ ಅವರು 1991ರಲ್ಲಿ ಯಕ್ಷಗಾನ ರಂಗಕ್ಕೆ ಬಂದರು. ಮುಂದೆ ಪಡ್ರೆ ಚಂದು ಅವರಿಂದಲೂ ನಾಟ್ಯಾಭ್ಯಾಸ ಮಾಡಿ ಬಳಿಕ ಶ್ರೀ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರ ಸೇರಿ ಕೋಳ್ಯೂರು ರಾಮಚಂದ್ರ ರಾಯರಿಂದ ಎಲ್ಲಾ ಬಗೆಯ ನೃತ್ಯಗಳಲ್ಲಿ ಪರಿಣತಿ ಗಳಿಸಿದರು.
ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಿದ ಮೋಹನ್ ಕಟೀಲು ಮೇಳದಲ್ಲಿ 29 ವರ್ಷ, ಎಡನೀರು ಮೇಳದಲ್ಲಿ ಎರಡು ವರ್ಷ, ಬಪ್ಪನಾಡಿನಲ್ಲಿ ಒಂದು ವರ್ಷ ಸೇರಿದಂತೆ ಒಟ್ಟು 32 ವರ್ಷಗಳ ತಿರುಗಾಟ ನಡೆಸಿದ್ದಾರೆ. ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ ಮುಂಡರು, ವಿಷ್ಣು, ಶ್ರೀಕೃಷ್ಣ, ಹಿರಣ್ಯಾಕ್ಷ, ಶಿಶುಪಾಲ, ದಕ್ಷ, ಋತುಪರ್ಣ, ಜಾಂಬವ, ಅಶ್ವತ್ಥಾಮ, ಶಶಿಪ್ರಭೆ, ಭ್ರಮರ ಕುಂತಳೆ ಇತ್ಯಾದಿ ಪಾತ್ರಗಳಲ್ಲಿ ಗಮನ ಸೆಳೆದ ಅವರು ಪ್ರಸ್ತುತ ಕಟೀಲು ಮೇಳದಲ್ಲಿ ದೇವಿ ಮಹಾತ್ಮೆಯ ರಕ್ತಬೀಜನಾಗಿ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಕದ್ರಿ ವಿಷ್ಣು ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ ಗೌರವ ಪಡೆದಿರುವ ಅಮ್ಮುಂಜೆ ಮೋಹನ್ ಕುಮಾರ್ ಪತ್ನಿ ಶಶಿಕಲಾ ಹಾಗೂ ಮಕ್ಕಳಾದ ವೈಶಾಖ ಮತ್ತು ವೈಷ್ಣವಿ ಅವರೊಂದಿಗೆ ಬಟ್ಲಬೆಟ್ಟು ‘ಕೌಸ್ತುಭಾ’ದಲ್ಲಿ ವಾಸವಾಗಿದ್ದಾರೆ.
ಬೊಂಡಾಲ ಪ್ರಶಸ್ತಿಯು ರೂ. 10,000/- ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು ಫೆಬ್ರವರಿ 15ರಂದು ನಡೆಯುವ ಬಯಲಾಟದ ವೇದಿಕೆಯಲ್ಲಿ ಗಣ್ಯರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನಗಳನ್ನು ಜೊತೆಯಾಗಿ ನೆರವೇರಿಸುವುದಾಗಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Back to top button