ಜ.6: ಬಜ್ಪೆ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರೆ – ತಾಳಮದ್ದಳೆ…

ಮಂಗಳೂರು: ಶ್ರೀ ಶನೈಶ್ಚರ ದೇವಸ್ಥಾನ ಬಜ್ಪೆ ಇದರ ವಾರ್ಷಿಕ ಜಾತ್ರಾ ಮಹೋತ್ಸವ 2024 ಜನವರಿ 6ನೇ ಶನಿವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ ಕ್ಷೇತ್ರದ ಮಹಾ ಗಣಪತಿ ಮತ್ತು ಪ್ರಧಾನ ದೇವತೆಗಳಿಗೆ ಗಣ ಹೋಮ, ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ ನೆರವೇರುವುದು. ಮದ್ಯಾಹ್ನ ಸಾರ್ವಜನಿಕ ಶ್ರೀ ಶನಿ ಶಾಂತಿ ಹೋಮ, ಮಹಾಪೂಜೆ ಮತ್ತು ಸಾಮೂಹಿಕ ಅನ್ನ ಸಂತರ್ಪಣೆಯಿದೆ ಎಂದು ಕ್ಷೇತ್ರದ ಧರ್ಮದರ್ಶಿ ಬಜ್ಪೆ ಆನಂದ ಪೂಜಾರಿ ತಿಳಿಸಿದ್ದಾರೆ.
ಸಾಯಂಕಾಲ ಕ್ಷೇತ್ರದ ದೈವಗಳಿಗೆ ಹೋಮ, ಪಂಚಕಜ್ಜಾಯ ಸೇವೆ, ದುರ್ಗಾ ನಮಸ್ಕಾರ, ದೇವರ ಕಲಶ ಬಲಿ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ಜರಗಲಿರುವುದು. ಜಾತ್ರೆಯ ಸಂದರ್ಭದಲ್ಲಿ ಭಕ್ತಾಭಿಮಾನಿಗಳಿಂದ ಹೊರೆ ಕಾಣಿಕೆಗಳನ್ನು ಸ್ವೀಕರಿಸಲಾಗುವುದು ಎಂದವರು ಪ್ರಕಟಿಸಿದ್ದಾರೆ

‘ಶ್ರೀ ಶನೈಶ್ಚರ ಮಹಾತ್ಮೆ’ ತಾಳಮದ್ದಳೆ:
ಜಾತ್ರಾ ಮಹೋತ್ಸವದ ಅಂಗವಾಗಿ ಅಂದು ಅಪರಾಹ್ನ 2ಗಂಟೆಯಿಂದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಬಳಗದವರಿಂದ ‘ಶ್ರೀ ಶನೈಶ್ಚರ ಮಹಾತ್ಮೆ – ವಿಕ್ರಮಾದಿತ್ಯ ಚರಿತ್ರೆ’ ತುಳು ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ಹಿಮ್ಮೇಳದಲ್ಲಿ ತೋನ್ಸೆ ಪುಷ್ಕಳ ಕುಮಾರ್, ಪ್ರಶಾಂತ ರೈ ಪುತ್ತೂರು, ರೋಹಿತ್ ಉಚ್ಚಿಲ್ ಮತ್ತು ಜಿತೇಶ್ ಕೋಳ್ಯೂರು ಭಾಗವಹಿಸುವರು. ಭಾಸ್ಕರ ರೈ ಕುಕ್ಕುವಳ್ಳಿ, ವಸಂತ ದೇವಾಡಿಗ, ಪಶುಪತಿ ಶಾಸ್ತ್ರಿ ಶಿರಂಕಲ್ಲು, ರವಿ ಅಲೆವೂರಾಯ ವರ್ಕಾಡಿ, ಡಾ. ದಿನಕರ ಎಸ್.ಪಚ್ಚನಾಡಿ ಅರ್ಥಧಾರಿಗಳಾಗಿರುವರು.
ವಾರ್ಷಿಕ ಪೂಜಾ ವಿಧಿಗಳನ್ನು ರಾಜೇಂದ್ರ ಪ್ರಸಾದ್ ಎಕ್ಕಾರ್, ಅಭಿಜಿತ್ ಆನಂದ ಭಟ್ ಅವರ ನೇತೃತ್ವದಲ್ಲಿ ರವಿ ಶಾಂತಿ, ಶ್ರೀಧರ ಶಾಂತಿ, ಯಶೋಧರ ಶಾಂತಿ, ಜಗದೀಶ ಶಾಂತಿ ಮೊದಲಾದ ಅರ್ಚಕ ವೃಂದದವರು ನಡೆಸಿ ಕೊಡುವರೆಂದು ಧರ್ಮದರ್ಶಿ ಆನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

whatsapp image 2024 01 02 at 3.31.53 pm

Sponsors

Related Articles

Back to top button