ಶಾಲೆ ಎಲ್ಲರ ದೇಗುಲವಾಗಲಿ – ನರಿಕೊಂಬು ಗ್ರಾ. ಪಂ ಅಧ್ಯಕ್ಷ ಸಂತೋಷ್ ಕುಮಾರ್…

ಬಂಟ್ಟಾಳ: ಶಾಲೆ ಸರ್ವರಿಗೂ ದೇಗುಲ. ಶಾಲೆಗಳಿಗೆ ದಾನ ಮಾಡಿದರೆ ದೇವಸ್ಥಾನ ಕಟ್ಟಿದಂತೆ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬಿನಲ್ಲಿ ನೂತನವಾಗಿ ನಿರ್ಮಾಣಗೊಂಡ ವಿವೇಕ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ವಿವೇಕಾ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಕೊಠಡಿಯನ್ನು ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಘು ಸಫಲ್ಯ ಉದ್ಘಾಟಿಸಿದರು. ಶಾಲೆ ಅಭಿವೃದ್ಧಿಯಾದರೆ ಊರೇ ಅಭಿವೃದ್ಧಿ ಆದಂತೆ. ದೊಡ್ಡ ವ್ಯಕ್ತಿಯಾದರೂ ತಾನು ಕಲಿತ ಊರಿನ ಶಾಲೆಯನ್ನು ಮರೆಯಬಾರದು ಅಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಲ್ಕೈತ್ತಾಯ ಪಂಜುರ್ಲಿ ಸೇವಾ ಸಮಿತಿಯ ಅಧ್ಯಕ್ಷರ ಜಗನ್ನಾಥ ಬಂಗೇರ, ಬಂಟ್ವಾಳ ಕೆಥೊಲಿಕ್ ಕೊ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೀವನ್ ಲಾಯ್ಡ್ ಪಿಂಟೊ ಭಾಗವಹಿಸಿದ್ದರು.
ಶಾಲೆಗೆ ಕೊಡುಗೆ ನೀಡಿದ ದಾನಿಗಳಾದ ದೀಪಕ್ ಕೋಡಿ, ದಿವ್ಯ ರಾಘವೇಂದ್ರ, ದೀಪ್ತಿ ಚರಣ್ ರಾಜ್, ಅಮಿತಾ ಗಿರೀಶ್,ಜಂಪ್ ರೋಲ್ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ವಿದ್ಯಾರ್ಥಿ ಸುನಿಲ್ ಚೌಹಾನ್, ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಶ್ರೀವಾಣಿ, ಶ್ರೀಹರ, ಉಚಿತ ಯಕ್ಷಗಾನ ತರಬೇತಿ ನೀಡುತ್ತಿರುವ ಓಂ ಪ್ರಕಾಶ್, ಕೋಕೋ ಆಟ ತರಬೇತಿ ನೀಡುತ್ತಿರುವ ಜಯಪ್ರಕಾಶ್. ಬಿಸಿ ಊಟ ತಯಾರಿಸುವ ಸಿಬ್ಬಂದಿ, ಶಾಲಾ ಆಯಾ, ಮೊದಲಾದವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಚಿತ್ರಾವತಿ, ರಂಜಿತ್ ಕೆದ್ದೇಲ್, ಭದ್ರಕಾಳಿ ದೇವಸ್ಥಾನ ಏರಮಲೆಯ ಅರ್ಚಕ ಕೇಶವ ಶಾಂತಿ, ನರಿಕೊಂಬು ಮೂರ್ತದಾರ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಅಮೀನ್, ವೀರ ಮಾರುತಿ ವ್ಯಾಯಾಮ ಶಾಲೆ ಮಾರುತಿ ನಗರದ ಅಧ್ಯಕ್ಷ ಚಂದ್ರಹಾಸ ಕೋಡಿಮಜಲು, ಉದ್ಯಮಿ ಮಾಧವ ಕುಲಾಲ್ ಶೇಡಿಗುರಿ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪ್ರೇಮ ಎಂ, ಶಾಲಾ ವರದಿ ವಾಚಿಸಿ, ಸಹ ಶಿಕ್ಷಕಿ ವಿಲ್ಮಾ ಪ್ರಸಿಲ್ಲಾ ಪಿಂಟೋ ಬಹುಮಾನಿತರ ಪಟ್ಟಿ ವಾಚಿಸಿ, ಅತಿಥಿ ಶಿಕ್ಷಕಿ ಬಬಿತಾ ವಂದಿಸಿದರು.
ಶಾಲಾ ದೈಹಿಕ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಅಕ್ಷರ ಯೋಗಿ ಹರೇಕಳ ಹಾಜಬ್ಬ ಜೀವನ ಚರಿತ್ರೆಯ ರೂಪಕ ಎಲ್ಲರಿಂದ ಮೆಚ್ಚುಗೆ ಪಡೆಯಿತು.

Sponsors

Related Articles

Back to top button