ಒಂದೇ ತಿಂಗಳಲ್ಲಿ ವಿವಾಹಿತ ಸೋದರಿಯರು ಆತ್ಮಹತ್ಯೆ- ವರದಕ್ಷಿಣೆಗಾಗಿ ಕೊಲೆ ಶಂಕೆ…

ಹಾಸನ: ಒಂದೇ ತಿಂಗಳಲ್ಲಿ ವಿವಾಹಿತ ಸೋದರಿಯರಿಬ್ಬರೂ ತಮ್ಮ ತಮ್ಮ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಮೃತ ಸೋದರಿಯರ ಪೋಷಕರು ದೂರಿದ್ದಾರೆ.

ಮೃತರನ್ನು ಸೌಂದರ್ಯ(21) ಮತ್ತು ಆಕೆಯ ತಂಗಿ ಐಶ್ವರ್ಯ (19) ಎಂದು ಗುರುತಿಸಲಾಗಿದೆ. 2021ರ ಜೂನ್ 8ರಂದು ಐಶ್ವರ್ಯ ತುಮಕೂರಿನ ಆಕೆಯ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆಕೆಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನಿಡಿದ್ದರೆಂದು ಆಕೆಯ ಪೋಷಕರು ಆರೋಪಿಸಿದ್ದರು. ಆ ಘಟನೆ ನಡೆದ ಕೇವಲ 17 ದಿನಗಳ ಅಂತರದಲ್ಲಿ ಅಂದರೆ ಜೂನ್ 25ಕ್ಕೆ ಸೌಂದರ್ಯ ಹೊಸನಗರದ ಕರಿಮನೆ ಕಾಡಿಗ್ಗೇರಿಯ ಅವಳ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸಕಲೇಶಪುರದ ಗೋಳಿಗೊಂಡೆ ಗ್ರಾಮದ ಉದಯ್ ಎನ್ನುವವರ ನಾಲ್ವರು ಮಕ್ಕಳ ಪೈಕಿ ಎರಡನೆಯವಳಾಗಿದ್ದ ಐಶ್ವರ್ಯಳನ್ನು ತುಮಕೂರಿನ ಕುಣಿಗಲ್ ಕಾವೇರಿಪುರದ ನಾಗರಾಜುವಿಗೆ ವಿವಾಹ ಮಾಡಿಕೊಟ್ಟಿದ್ದು ನಾಗರಾಜು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದು ತುಮಕೂರಿನ ಸರಸ್ವತಿಪುರದಲ್ಲಿ ವಾಸವಿದ್ದರು.
ಸೌಂದರ್ಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು ಕಾಡಿಗ್ಗೇರಿಯ ಉಮೇಶ್ ಎಂಬಾತನೊಂದಿಗೆ 2020ರಲ್ಲಿ ವಿವಾಹವಾಗಿತ್ತು. ಉಮೇಶ್ ಹಾಗೂ ಸೌಂದರ್ಯ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರೆನ್ನಲಾಗಿದ್ದು ಇಬ್ಬರ ಜಾತಿ ಬೇರೆ ಬೇರೆಯಾಗಿದೆ, ಮನೆಯವರ ವಿರೋಧದ ನಡುವೆ ಅವರು ವಿವಾಹವಾಗಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ.

Sponsors

Related Articles

Back to top button