ಕಂಬಳ ಅಸೋಸಿಯೇಷನ್ ರಚನೆಗೆ ಸರಕಾರದ ನಿರ್ಧಾರ…

ಬೆಂಗಳೂರು: ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಎ.19 ರಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಶತಮಾನಗಳಿಂದ ಐತಿಹಾಸಿಕ ಪರಂಪರೆಯಿರುವ ಕಂಬಳ ಕ್ರೀಡೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಂಬಳ ಅಸೋಸಿಯೇಷನ್ ರಚಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮಾರ್ಚ್ ತಿಂಗಳಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಇತರ ಸದಸ್ಯರು ಈ ವಿಷಯ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಸಭಾಪತಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಕಂಬಳ ಕ್ರೀಡೆಯನ್ನು ಹೆಚ್ಚು ಸಂಘಟಿತವಾಗಿ ಮತ್ತು ಪರಿಣಾಮಕಾರಿಯಾಗಿ ಆಯೋಜಿಸಲು ರಾಜ್ಯ ಮಟ್ಟದ ಕಂಬಳ ಅಸೋಸಿಯೇಷನ್ ರಚಿಸಬೇಕು. ಇದಕ್ಕೆ ಕ್ರೀಡಾ ಇಲಾಖೆಯ ಅನುಮೋದನೆ, ರಾಜ್ಯ ಸರಕಾರದಿಂದ ಅನುದಾನ ಪಡಯಬೇಕು. ಬಳಿಕ ಎಲ್ಲ ಜಿಲ್ಲಾ ಮತ್ತು ಸ್ಥಳೀಯ ಕಂಬಳ ಸಮಿತಿಗಳನ್ನು ರಾಜ್ಯ ಮಟ್ಟದ ಅಸೋಸಿಯೇಷನ್ ನಲ್ಲಿ ನೋಂದಾಯಿಸಿ ಪ್ರತ್ಯೇಕ ಬೈಲಾ ರಚಿಸಿ ಸ್ಥಳೀಯ ಕಂಬಳ ಸಮಿತಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಗೆ ಪೂರಕವಾಗಿ ಸಭಾಪತಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆದಿದೆ. ಈ ಸಭೆ ಯಶಸ್ವಿಯಾಗಿದ್ದು, ಕಂಬಳ ಅಸೋಸಿಯೇಷನ್ ರಚನೆಗೆ ಮಹತ್ವದ ನಿರ್ಧಾರವಾಗಿದೆ. ಇದರಿಂದ ಕಂಬಳ ಕ್ರೀಡೆಗೆ ಹೊಸ ಆಯಾಮ ಸಿಕ್ಕಿದೆ ಎಂದು ವಿಧಾನ ಪರಿಷದ್ ಸದಸ್ಯರಾದ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

Sponsors

Related Articles

Back to top button