ಶಕ್ತಿನಗರ ಶ್ರೀ ವೈದ್ಯನಾಥ ವರ್ಷಾವಧಿ ಬಂಡಿ ಉತ್ಸವ- ನಂಬಿ ನಂಬಿಸುವ ತುಳುವರ ಆಚರಣೆ ದೈವಾರಾಧನೆ: ಭಾಸ್ಕರ ರೈ ಕುಕ್ಕುವಳ್ಳಿ…

ಮಂಗಳೂರು: ‘ನಂಬುಲೆ ನಂಬಾದ್ ಕೊರ್ಪೆ ಎಂಬ ನುಡಿಗಟ್ಟಿನಂತೆ ಕರಾವಳಿ ಜನರು ನಂಬುವ ನಂಬಿಸುವ ವಿಶಿಷ್ಟ ಬಗೆಯ ದೈವಿಕ ಆಚರಣೆ ತುಳುನಾಡಿನ ದೈವಾರಾಧನೆ. ಮಾಯ ಜೋಗಗಳ ಮೂಲಕ ತುಳುವರು ಅಲೌಕಿಕ ಜಗತ್ತಿನ ಅನುಭೂತಿಯೊಂದಿಗೆ ಆತ್ಮ ಸಾಕ್ಷಾತ್ಕಾರ ಪಡೆಯುವುದು ದೈವಾರಾಧನೆ ಅಥವಾ ಭೂತಾರಾಧನೆಯ ಮೂಲ ತತ್ವ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಶಕ್ತಿನಗರದ ಕೊಡಂಗೆ ಮುರ ಶ್ರೀ ವೈದ್ಯನಾಥ ದೈವಸ್ಥಾನದ ವರ್ಷಾವಧಿ ಬಂಡಿ ನೇಮೋತ್ಸವ ಪ್ರಯುಕ್ತ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ‘ಅರಸು ವೈದ್ಯನಾಥ ಸಾಕ್ಷಾತ್ ಧನ್ವಂತರಿ. ಶಿವನೇ ಭವರೋಗ ವೈದ್ಯನಾಗಿ ಭೂಮಿಗೆ ಕಳುಹಿಸಿಕೊಟ್ಟ ದೈವರಾಜ. ವೈದ್ಯನಾಥನ ಬಂಡಿ ಉತ್ಸವವೆಂದರೆ ಪರಮೇಶ್ವರ ನಂದಿವಾಹನನಾಗಿ ಭಕ್ತರ ಬಳಿ ಬರುವುದರ ಸಂಕೇತವೇ ಆಗಿದೆ’ ಎಂದವರು ನುಡಿದರು. ಮಂಗಳೂರು ಮಹಾನಗರಪಾಲಿಕೆ ಸದಸ್ಯರಾದ ಶಕೀಲ ಕಾವ ಕ್ಷೇತ್ರದ ಪರವಾಗಿ ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಿದರು.
ಶ್ರೀ ವೈದ್ಯನಾಥ ದೈವಸ್ಥಾನದ ಮೊಕ್ತೇಸರರು ಮತ್ತು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಕಲ್ಲೇಕಾರುಗುತ್ತು ಮೋನಪ್ಪ ಭಂಡಾರಿ ಪ್ರಸ್ತಾವನೆಗೈದು ಅತಿಥಿಗಳನ್ನು ಪರಿಚಯಿಸಿದರು. ಕಾರ್ಪೋರೇಟರ್ ವನಿತಾ ಪ್ರಸಾದ್, ಮೊಕ್ತೇಸರರುಗಳಾದ ನಂದ ಕಿಶೋರ್, ಸೀತಾರಾಮ ಶೆಟ್ಟಿ ಮುದ್ದರಮನೆ,ಗಣೇಶ್ ಕುಂಟಲ್ಪಾಡಿ ಉಪಸ್ಥಿತರಿದ್ದರು. ಸೇವಾ ಸಮಿತಿಯ ರವೀಂದ್ರ ರೈ ಸ್ವಾಗತಿಸಿದರು. ಹರೀಶ್ ಜೋಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Sponsors

Related Articles

Back to top button