ತಾಳಮದ್ದಳೆ ಮತ್ತು ಕೃಷಿ ಕ್ಷೇತ್ರದ ಅನನ್ಯ ಸಾಧಕ ಕಾಂತ ರೈ…

ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ಶ್ರೀಪತಿ ಭಟ್ ಮೂಡಬಿದ್ರೆ...

ಮಂಗಳೂರು: ‘ಯಕ್ಷಗಾನದ ಹಳೆಯ ತಲೆಮಾರಿನ ವಿದ್ವತ್ ಪರಂಪರೆಯಲ್ಲಿ ಪ್ರಮುಖರಾದವರು ವಿದ್ವಾನ್ ಕಾಂತರೈ. ತಾಳಮದ್ದಳೆ ಮತ್ತು ಕೃಷಿ ಕ್ಷೇತ್ರದಲ್ಲಿ ಅವರದು ಅನನ್ಯ ಸಾಧನೆ. ಮೂಡಬಿದಿರೆ ಜೈನ್ ಜ್ಯೂನಿಯರ್ ಕಾಲೇಜು ಕನ್ನಡ ಪ್ರಾಧ್ಯಾಪಕರಾಗಿದ್ದ ಅವರು ಸಮಾಜದಲ್ಲಿಂದು ಪ್ರತಿಷ್ಠಿತ ಸ್ಥಾನದಲ್ಲಿರುವ ಹಲವು ಗಣ್ಯರನ್ನು ಶಿಷ್ಯರನ್ನಾಗಿ ಪಡೆದಿದ್ದರು’ ಎಂದು ಮೂಡಬಿದಿರೆ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರಿ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಹೇಳಿದ್ದಾರೆ.
ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯಾದ ‘ಯಕ್ಷಾಂಗಣ ಮಂಗಳೂರು’, ಮಂಗಳೂರು ವಿಶ್ವವಿದ್ಯಾ ನಿಲಯದ ಡಾl ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಸಪ್ತ ವಿಜಯ’ ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022 ಹತ್ತನೇ ವರ್ಷದ ನುಡಿ ಹಬ್ಬ ಸಂದರ್ಭ ವಿದ್ವಾನ್ ಕಾಂತ ರೈ ಸಂಸ್ಮರಣ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಅವರು ಮಾತನಾಡಿದರು. ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಕಲ್ಲಿಮಾರು ನುಡಿ ನಮನ ಸಲ್ಲಿಸಿದರು.

ಪ್ರೊ.ಜಿ.ಆರ್ ರೈಗೆ ಸಮ್ಮಾನ:
ಸಮಾರಂಭದಲ್ಲಿ 96 ವರ್ಷದ ಹಿರಿಯ ವಿದ್ವಾಂಸ, ಮಣಿಪಾಲ ಮತ್ತು ನಿಟ್ಟೆ ಇಂಜಿನಿಯರಿಂಗ್ ಕಾಲೇಜು ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಆರ್.ರೈ ಅವರನ್ನು ಸನ್ಮಾನಿಸಲಾಯಿತು. ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಭಾರತಿ ಬಿಲ್ಡರ್ಸ್ ನ ಲೋಕನಾಥ ಶೆಟ್ಟಿ, ದಿ. ಕಾಂತ ರೈಯವರ ಮೊಮ್ಮಗ ಪ್ರಗತಿಪರ ಕೃಷಿಕ ವಿಶಾಲಕೀರ್ತಿ ರೈ ಹೊಸಂಗಡಿ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಸುಧಾಕರ್ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿ ದರು. ಸುಮ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಆಜ್ರಿ ಉಪಸ್ಥಿತರಿದ್ದರು.
‘ಭೀಮಸೇನ ವಿಜಯ’ ತಾಳಮದ್ದಳೆ:
ಬಳಿಕ ‘ಸಪ್ತ ವಿಜಯ’ ಸರಣಿ ಅಂಗವಾಗಿ ಜರಗಿದ ನಾಲ್ಕನೇ ಪ್ರಸಂಗ ‘ಭೀಮಸೇನ ವಿಜಯ’ ತಾಳಮದ್ದಳೆಯಲ್ಲಿ ಪುರುಷೋತ್ತಮ ಭಟ್ ನಿಡುವಜೆ ಮತ್ತು ಭರತರಾಜ್ ಶೆಟ್ಟಿ ಸಿದ್ದಕಟ್ಟೆ ಅವರ ಭಾಗವತಿಕೆಯಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರು ಪಾಲ್ಗೊಂಡರು.

Sponsors

Related Articles

Back to top button