ಪ್ರತಿಯೊಬ್ಬನ ವ್ಯಕ್ತಿತ್ವಕ್ಕೂ ಘನತೆ ಇದೆ- ಎ.ಕೃಷ್ಣಪ್ಪ ಪೂಜಾರಿ…

ಬಂಟ್ವಾಳ: ಜೀವನದಲ್ಲಿ ನಮ್ಮ ಸಾಧನೆ ಮತ್ತು ಆದರ್ಶವನ್ನು ಸಮಾಜವು ಸೂಕ್ಷ್ಮವಾಗಿ ಗಮನಿಸುತ್ತದೆ. ಸಚ್ಚಾರಿತ್ರ್ಯ ಮತ್ತು ನಿಸ್ವಾರ್ಥದಿಂದ ದುಡಿದಾಗ ಮಾತ್ರ ನಮ್ಮ ವ್ಯಕ್ತಿತ್ವಕ್ಕೆ ಮೌಲ್ಯ ಬರುವುದು . ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅನುಭವಗಳು ಪರಸ್ಪರ ವಿನಿಮಯವಾದಾಗ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಸಿಗುವುದೆಂದು ಬೆಳ್ತಂಗಡಿ ಗುರುದೇವ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ತಿಳಿಸಿದರು.
ಬೆಳ್ತಂಗಡಿ ಲಾಯಿಲ ಶ್ರೀ ರಾಘವೇಂದ್ರ ಮಠದ ಆವರಣದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
53 ವರ್ಷಗಳ ಅಧ್ಯಾಪನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷ್ಣಪ್ಪ ಪೂಜಾರಿ ಅವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನಾ ನುಡಿಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೈಯಾರು ನಾರಾಯಣ ಭಟ್ ಧನಾತ್ಮಕವಾದ ಚಿಂತನೆಯ ಮೂಲಕ ಸಮಾಜದ ಪ್ರಗತಿಯಲ್ಲಿ ಹಿರಿಯರು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆಯೆಂದು ತಿಳಿಸಿದರು.
ಬೆಳ್ತಂಗಡಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಪ್ರತಿಷ್ಠಾನದ ಕಾರ್ಯಕ್ರಮಗಳು ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.
ಇತ್ತೀಚೆಗೆ ನಿಧನರಾದ ಬಲಿಪ ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಪ್ರತಿಷ್ಠಾನದ ಸಹ ಸಂಚಾಲಕ ಭಾಸ್ಕರ್ ಬಾರ್ಯ ಬಲಿಪರ ಸಾಧನೆಗಳ ಬಗ್ಗೆ ಮಾತಾಡಿ ನುಡಿ ನಮನ ಸಲ್ಲಿಸಿದರು.
ಎ. ಕೃಷ್ಣಶರ್ಮ ಬಿ .ಸಿ ರೋಡು, ಕೆ. ಉದಯಶಂಕರ ರೈ ಪುಣಚ,ಕೆ. ರಾಮಕೃಷ್ಣ ನಾಯಕ್, ಶ್ರೀಮತಿ ವಾರಿಜಾ.ಕೆ, ಟಿ. ಆರ್. ಅಡ್ಯಂತಾಯ, ಶ್ರೀಮತಿ ಬಿ.ಕುಸುಮಾವತಿ,ಗಣೇಶ್ ಭಟ್ ಕುತ್ರೊಟ್ಟು, ಶ್ರೀಮತಿ ಭಾರತಿ ಎಂ. ಎಲ್.ಗೇರುಕಟ್ಟೆ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಜಿರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕ ವಸಂತ ಸುವರ್ಣ ಬೆಳ್ತಂಗಡಿ ಸ್ವಾಗತಿಸಿ ಪ್ರತಿಷ್ಠಾನದ ಉಪಾಧ್ಯಕ್ಷ ಯಂ. ಜಯರಾಮ ಭಂಡಾರಿ ಧರ್ಮಸ್ಥಳ ವಂದಿಸಿದರು. ಎಸ್ .ಕೆ .ಡಿ .ಆರ್ . ಡಿ.ಪಿ ಯ ನಿವೃತ್ತ ಪ್ರಾದೇಶಿಕ ಅಧಿಕಾರಿ ಬೂದಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button