ಕಲ್ಲಡ್ಕ ರಾಮ ಮಂದಿರದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಸಮಾರೋಪ…

ಬಂಟ್ವಾಳ: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ದ.ಕ.ಜಿಲ್ಲಾ ಸಹಕಾರ ಭಾರತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇವರ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಉದ್ಯೋಗ ನೈಪುಣ್ಯ ತರಬೇತಿಯ ಮೊದಲ ಹಂತದ 3 ವಿಷಯಗಳ ಸಮಾರೋಪ ಸಮಾರಂಭ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಆ.1 ರಂದು ನಡೆಯಿತು.
ಹೈನುಗಾರಿಕೆ, ಕೃಷಿಯಂತ್ರೋಪಕರಣ ಬಳಕೆ ಮತ್ತು ದುರಸ್ತಿ ಹಾಗೂ ಪ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್ ಈ ಮೂರು ವಿಷಯಗಳ
ಬಗ್ಗೆ ಮೂವತ್ತು ಗಂಟೆಗಳ ಕಾಲ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ 35 ಜನರಿಗೆ ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಮಾಣ ಪತ್ರವನ್ನು ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಜಿಲ್ಲಾ ಸಂಘಚಾಲಕರಾದ ಕೊಡ್ಮಣ್ ಕಾಂತಪ್ಪ ಶೆಟ್ಟಿ ವಹಿಸಿದ್ದರು. ಪರಿವರ್ತನೆಯ ಕಾಲಘಟ್ಟದಲ್ಲಿ, ದೇಶದ ಪರಮವೈಭವದ ಶಿಲ್ಪಿಗಳು ನಾವಾಗಬೇಕು. ಆ ದಿಕ್ಕಿನಲ್ಲಿ ದೇಶದಲ್ಲೇ ಮೊದಲ ಶಿಬಿರ ಇದು ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಅಧ್ಯಕ್ಷರಾದ ಪ್ರಸನ್ನ ಭಟ್ ಬಲ್ನಾಡು ಅವರು ಶಿಕ್ಷಣ ಕೇವಲ ಪುಸ್ತಕದ ಓದಿನಿಂದ ಬರುವುದಲ್ಲ, ಕೃಷಿಯಿಂದ ಬದುಕನ್ನು ಕಟ್ಟಿಕೊಂಡವರು ಹಳ್ಳಿಗಳನ್ನು ಸುಸಂಪನ್ನಗೊಳಿಸಬೇಕು ಎಂದರು.
ಸಹಾಕಾರ ಭಾರತಿಯ ತಾಲೂಕು ಕಾರ್ಯದರ್ಶಿ ವಿಶ್ವನಾಥ ಮುರಬೈಲ್, ನಾವು ಕೇವಲ ಉದ್ಯೋಗಿಗಳಾಗದೆ, ಉದ್ಯಮಿಗಳಾಗಬೇಕು. ಮುಂದಿನ ಹಂತದ ತರಬೇತಿಗಳಿಗೂ ಆಸಕ್ತರನ್ನು ಜೋಡಿಸಬೇಕು ಎಂದರು.
ವಿದ್ಯಾಭಾರತಿಯ ಪ್ರಾಂತ ಕಾಲೇಜ್ ಶಿಕ್ಷಣ ಪ್ರಮುಖ್ ಕೃಷ್ಣಪ್ರಸಾದ್ ತರಬೇತಿ ಶಿಬಿರದ ಮುಕ್ತಾಯದೊಂದಿಗೆ ಕೆಲಸದ ಆರಂಭ ಆಗಿದೆ. ಇಲ್ಲಿ ಕಲಿತ ನೈಪುಣ್ಯದ ಅನುಷ್ಠಾನ ಆಗಬೇಕು. ಮುಂದಿನ ವರ್ಷ ನಾವೇ ಶಿಕ್ಷಕರಾಗಬೇಕು. ಸಂಘಟನೆಯ ಜೊತೆ ಜೋಡಿಕೊಂಡರೆ ಯಶಸ್ಸು ಸಾಧ್ಯ ಎಂದು ತಮ್ಮ ಆಶಯನುಡಿ ಆಡಿದರು.
ಗಜೇಶ್ ಅಮ್ಟೂರು ಸ್ವಾಗತಿಸಿದರು. ಜಗದೀಶ ಮಾರಮಜಲು ವಂದಿಸಿದರು. ಜಿನ್ನಪ್ಪ ಕುದ್ರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಆದಿತ್ಯ ನೆಟ್ಲ ಆಶಯಗೀತೆ ಹಾಡಿದರು.

Sponsors

Related Articles

Leave a Reply

Your email address will not be published. Required fields are marked *

Back to top button