ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು -ರಾಷ್ಟ್ರೀಯ ವಿಜ್ಞಾನ ದಿನಾಚರಣೆ…

ಪುತ್ತೂರು: ಅವಿರತವಾಗಿ ಮತ್ತು ಅವ್ಯಾಹತವಾಗಿ ನಡೆಯುವ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಮಾನವ ಮತ್ತು ಪ್ರಾಣಿಗಳ ಮಧ್ಯೆ ಸಂಘರ್ಷಗಳು ಉಂಟಾಗುತ್ತಿದ್ದು, ಇದನ್ನು ತಡೆಯದೇ ಹೋದರೆ ಮುಂದೊಂದು ದಿನ ಪ್ರಾಣಿ ಪಕ್ಷಿಗಳನ್ನು ಚಿತ್ರಪಟದಲ್ಲಿ ನೋಡಬೇಕಾದ ಪರಿಸ್ಥಿತಿ ಉದ್ಭವಿಸಬಹುದು ಎಂದು ಪುತ್ತೂರಿನ ಶೇಷವನ ಚಾರಿಟೇಬಲ್ ಟ್ರಸ್ಟ್ ನ ನಿರ್ವಾಹಕ ನಿರ್ದೇಶಕ ಡಾ.ರವೀಂದ್ರನಾಥ್ ಐತಾಳ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಐಎಸ್‍ಟಿಇ ಸ್ಟೂಡೆಂಟ್ ಚಾಪ್ಟರ್ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಪ್ರಕೃತಿಯ ಮಾರಣ ಹೋಮದಿಂದಾಗಿ ಇಡೀ ಜೀವ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗಿದೆ ಇದರಿಂದ ಅಕಾಲದಲ್ಲಿ ಅತಿವೃಷ್ಟಿ, ಅನಾವೃಷ್ಟಿಗಳು, ವಾತಾವರಣದ ವೈಪರೀತ್ಯಗಳನ್ನು ನಾವು ಗಮನಿಸುತ್ತಿದ್ದೇವೆ ಇದನ್ನು ಸರಿಪಡಿಸುವುದಕ್ಕೆ ನಾವು ಕಂಕಣಬದ್ಧರಾಗಬೇಕು ಎಂದು ನುಡಿದರು. ಹಾವು ನಾವು ಮತ್ತು ಪರಿಸರ ಎನ್ನುವ ವಿಷಯನ್ನು ವಿಶ್ಲೇಷಿಸಿದ ಅವರು ಕರಾವಳಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳ ಮಾಹಿತಿಯನ್ನು ನೀಡಿದರು. ತಾವು ತಂದಿದ್ದ ಹಾವುಗಳನ್ನು ತೋರಿಸಿ ಪರಿಸರದಲ್ಲಿ ಮಾನವ ಮತ್ತು ಪ್ರಾಣಿ ಪಕ್ಷಿಗಳ ಸಹಜೀವನದ ಬಗ್ಗೆ ಬೆಳಕು ಚೆಲ್ಲಿದರು. ಹಾವು ಕಡಿತದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳು ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆಯೂ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಿ. ಮಾತನಾಡಿ ಆವಶ್ಯಕತೆಯು ಪ್ರತಿಯೊಂದು ಆವಿಷ್ಕಾರದ ಮೂಲವಾಗಿದೆ. ಮಾನವ ತನ್ನ ಆವಶ್ಯಕತೆಗನುಗುಣವಾಗಿ ಸಂಶೋಧನೆಗಳನ್ನು ನಡೆಸುತ್ತಾ ಹೋದಂತೆ ವಿಜ್ಞಾನವು ಬೆಳೆಯಿತು ಎಂದರು. ನೋಬೆಲ್ ಪ್ರಶಸ್ತಿ ಪಡೆದ ಪ್ರಸಿದ್ಧ ವಿಜ್ಞಾನಿ ಸರ್.ಸಿ.ವಿ ರಾಮನ್ ಅವರ ವಿನೂತನ ಸಂಶೋಧನೆ ರಾಮನ್ ಎಫೆಕ್ಟ್ ನ್ನು ಜಗತ್ತಿಗೆ ಪರಿಚಯಿಸಿದ ದಿನದ ಸವಿ ನೆನಪಿಗಾಗಿ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ಮಹಾನ್ ವಿಜ್ಞಾನಿಯ ಆದರ್ಶಗಳನ್ನು ಅನುಸರಿಸುತ್ತ ಸಮಾಜಮುಖೀ ಸಂಶೋಧನೆಗಳನ್ನು ನಡೆಸಬೇಕು ಎಂದು ಹೇಳಿದರು. ಕೋವಿಡ್ ನಂತರದ ದಿನಗಳಲ್ಲಿ ಹೆಚ್ಚು ಏಕಾಗ್ರತೆಯೊಂದಿಗೆ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ನುಡಿದರು.
ರಾಷ್ಟ್ರೀಯ ಗಣಿತ ದಿನ 2021ರ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನವನ್ನಿತ್ತು ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ., ಮೂಲವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್, ಕಾರ್ಯಕ್ರಮ ಸಂಯೋಜಕಿ ಪ್ರೊ .ಶ್ವೇತಾಂಬಿಕಾ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸ್ನೇಹ ಬಿ ಸ್ವಾಗತಿಸಿ, ಸರೋಶ್ ವಿಜ್ಞಾನ ದಿನದ ಬಗ್ಗೆ ಪ್ರಸ್ತಾವನೆಗೈದರು. ಅನುಪಮ ಅತಿಥಿಗಳನ್ನು ಪರಿಚಯಿಸಿದರು. ಶ್ರೀಕೃಪಾ ವಂದನಾರ್ಪಣೆಗೈದರು. ವಿದಿಶ ಭಟ್ ಮತ್ತು ಹಿತೈಷಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button