ತೆಕ್ಕಿಲ್ ಪ್ರತಿಷ್ಠಾನದಿಂದ 21 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ…
ಮಾನವೀಯ ಧರ್ಮವನ್ನು ಪಾಲಿಸಿ - ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ...
ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ವತಿಯಿಂದ 21 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಮಾ. 13 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿದರು.
ಸೌಹಾರ್ದ ಸಂದೇಶ ನೀಡಿ ಮಾತನಾಡಿದ ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಜಾತಿಮತ ಬೇಧವಿಲ್ಲದೆ ಸೌಹಾರ್ದತೆಯಿಂದ ಮಾನವೀಯ ಧರ್ಮವನ್ನು ಪಾಲಿಸಿಕೊಂಡು ಬದುಕಬೇಕೆಂದು ಕರೆ ನೀಡಿದರು. ಇಂದಿನ ಕಾಲಘಟ್ಟದಲ್ಲಿ ಸೌಹಾರ್ದತೆ ಅಗತ್ಯವಾಗಿದೆ. ಪರಧರ್ಮ ಸಹಿಷ್ಣುತೆಯೊಂದಿಗೆ ಸಹಬಾಳ್ವೆ ನಡೆಸಬೇಕು. ನಾನು 15 ವರುಷಗಳ ಹಿಂದೆ ಪ್ರತಿಷ್ಠಾನ ಹಮ್ಮಿಕೊಂಡ ಸೌಹಾರ್ದ ಕೂಟದಲ್ಲಿ ಖ್ಯಾತ ವಾಗ್ಮಿ ಅಬ್ದುಲ್ ಸಮದ್ ಸಮದಾನಿ ಹಾಗು ಮಾಜಿ ಸಚಿವೆ ಮೋಟಮ್ಮ ಭಾಗವಹಿಸಿದ ಕಾರ್ಯಕ್ರಮಕ್ಕೆ ಬಂದಿರುವುದನ್ನು ಸ್ಮರಿಸುತ್ತಾ ಟಿ.ಎಂ ಶಹೀದ್ ತೆಕ್ಕಿಲ್ ರವರ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶಿಕ್ಷಣ, ಸಮಾಜ ಸೇವೆ, ರಾಜಕೀಯ ಪ್ರಗತಿಯನ್ನು ಶ್ಲಾಘಿಸಿದರು.
ಗುತ್ತಿಗಾರು ಸೈಂಟ್ ಮೇರೀಸ್ ಚರ್ಚ್ ನ ಧರ್ಮಗುರುಗಳಾದ ಆದರ್ಶ್ ಜೋಸೆಫ್ ಮಾತನಾಡಿ ದೇವರು ಒಬ್ಬನೆ ನಾಮ ಹಲವು ನಾವು ಯಾರೊಂದಿಗೆ ದ್ವೇಷ ಮಾಡದೆ ಪ್ರೀತಿಯಿಂದ ಬದುಕಬೇಕು ಹಾಗೂ ದೇವರ ಪ್ರೀತಿಯನ್ನು ಗಳಿಸಬೇಕು ಎಂದರು. ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿಯ ಖತೀಬರಾದ ನಯೀಮ್ ಫೈಝಿ ಅಲ್ ಮಹಬರಿ ಎಲ್ಲಾ ಧರ್ಮದ ಮಧ್ಯೆ ಸಾಮರಸ್ಯ ಸಹೋದರತೆ ಅತೀ ಅಗತ್ಯ. ನಮ್ಮ ದೇಶ ವೈವಿದ್ಯತೆಯಿಂದ ಕೂಡಿದ ದೇಶವಾಗಿದೆ. ವಿವಿಧ ಭಾಷೆ, ಜಾತಿ, ಸಂಸ್ಕೃತಿಗಳನ್ನೊಳಗೊಂಡಿದೆ. ಇಲ್ಲಿ ಸೌಹಾರ್ದ ಕೂಟಗಳು, ಸಮ್ಮೇಳನಗಳು ಹೆಚ್ಚಾಗಿ ಆಗಬೇಕು ಮತ್ತು ದೇಶದ ಮೂಲೆ ಮೂಲೆಗಳಲ್ಲಿ ನಡೆಯುವಂತಾಗಲಿ ಎಂದರು.
ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್ ಸೌಹಾರ್ದ ಇಫ್ತಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಪ್ರತೀವರ್ಷ ಸರ್ವಧರ್ಮದವರನ್ನು ಕರೆದು ಸೌಹಾರ್ದ ಇಫ್ತಾರ್ ಕೂಟವನ್ನು ನಡೆಸುತ್ತಿದ್ದು ಎಲ್ಲಾ ಧರ್ಮದವರು ಬರುತ್ತಿದ್ದಾರೆ. ಇವರ ಅಜ್ಜನ ಕಾಲದಿಂದ ನಡೆದ ಸೌಹಾರ್ದತೆ ಇವರದು ಅಲ್ಲದೆ ಇಫ್ತಾರ್ ಸಮಾರಂಭದಲ್ಲಿ ಎಲ್ಲರು ಪಾಲ್ಗೊಳ್ಳುತ್ತಾರೆ ಮತ್ತು ಅವರಿಗೆ ಇಂದು ಸಚಿವ ಸ್ಥಾನಮಾನ ದೊರಕಿರುವುದು ನಮ್ಮೂರಿಗೆ ಹೆಮ್ಮೆ ಎಂದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಶುಭಾಂಶನೆಗೈದರು.
ಸುಳ್ಯ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ ಮುಸ್ತಫ, ತಹಶೀಲ್ದಾರ್ ಮಂಜುಳ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಹರಗಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಪಯಾಝ್ ಅಹ್ಮದ್, ಸುಳ್ಯ ಠಾಣಾಧಿಕಾರಿ ಸಂತೋಷ್, ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ್, ಸುಳ್ಯ ಬ್ಲಾಕ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ನ.ಪಂ ಮಾಜಿ ಅಧ್ಯಕ್ಷ ಸಂಶುದ್ಧೀನ್, ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ್, ಕೆಪೆಕ್ ಮಾಜಿ ಸದಸ್ಯ ಪಿ.ಎ ಮಹಮ್ಮದ್, ಮಾಜಿ ನಗರ ಪಂಚಾಯತ್ ಸದಸ್ಯ ಗೋಕುಲ್ ದಾಸ್, ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಟಿ.ಎಂ ಶಮೀರ್ ತೆಕ್ಕಿಲ್, ಟಿ.ಎಂ ಜಾವೇದ್ ತೆಕ್ಕಿಲ್, ಉದ್ಯಮಿ ಅಮೀರ್ ಚೆಂಗಳ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸರ್ವ ಧರ್ಮ, ಸರ್ವ ಪಕ್ಷದ, ಸಾಮಾಜಿಕ,ಕ್ಷೇತ್ರದ ಅಧಿಕಾರಿಗಳು ಸಮೂಹಿಕವಾಗಿ ಇಫ್ತಾರ್ ನೆರೆವೇರಿಸಿದರು. ಎಲ್ಲರೂ ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.






