ತೂಗು ಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ್ ನಿಧನ-ಅಬ್ದುಲ್ ರಹಿಮಾನ್ ಮೊಗರ್ಪಣೆ ಸಂತಾಪ…

ಸುಳ್ಯ:ದೇಶದಾದ್ಯಂತ ತೂಗು ಸೇತುವೆಗಳ ನಿರ್ಮಾಣದ ಮೂಲಕ ಸಾವಿರಾರು ಜನರ ಬದುಕಿಗೆ ಸಂಪರ್ಕ ಕಲ್ಪಿಸಿ “ತೂಗು ಸೇತುವೆಗಳ ಸರದಾರ” ಎಂದೇ ಖ್ಯಾತಿ ಪಡೆದ, ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಅಬ್ದುಲ್ ರಹಿಮಾನ್ ಮೊಗರ್ಪಣೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ .
ಸರಳತೆ, ಸೌಜನ್ಯ ಮತ್ತು ಆತ್ಮೀಯತೆಯ ಪ್ರತಿರೂಪವಾಗಿದ್ದ ಡಾ. ಗಿರೀಶ್ ಭಾರದ್ವಾಜ್ ಅವರು ಯಾರೇ ಎದುರಾದರೂ ಮಂದಹಾಸದೊಂದಿಗೆ ಆತ್ಮೀಯವಾಗಿ ಕೈಕುಲುಕಿ ಮಾತನಾಡುವ ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ತಮ್ಮ ಬದುಕಿನ ಬಹುಭಾಗವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಟ್ಟು, ನದಿಗಳಿಂದ ಸಂಪರ್ಕ ಕಡಿತಗೊಂಡಿದ್ದ ಹಲವಾರು ಗ್ರಾಮಗಳನ್ನು ತೂಗು ಸೇತುವೆಗಳ ಮೂಲಕ ಒಂದಕ್ಕೊಂದು ಜೋಡಿಸಿ ಸಾವಿರಾರು ಜನರ ಬದುಕಿಗೆ ಹೊಸ ಆಶಾಕಿರಣ ಮೂಡಿಸಿದ್ದರು.
ಡಾ. ಗಿರೀಶ್ ಭಾರದ್ವಾಜ್ ಅವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಸದ್ಗತಿ ಕರುಣಿಸಲಿ. ಅವರ ಆದರ್ಶ ವ್ಯಕ್ತಿತ್ವ, ಸೇವಾ ಮನೋಭಾವ ಮತ್ತು ಸಮಾಜಮುಖಿ ಕಾರ್ಯಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿವೆ ಎಂದು ಅಬ್ದುಲ್ ರಹಿಮಾನ್ ಮೊಗರ್ಪಣೆ ಸಂತಾಪ ಸೂಚಿಸಿದ್ದಾರೆ.





