ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಪ್ರಾಜೆಕ್ಟ್ ಗಳ ಪ್ರದರ್ಶನ “ತಂತ್ರೋತ್ಸವ”…
ಪುತ್ತೂರು: ಯುವ ಮನಸ್ಸುಗಳು ಕೇವಲ ಪುಸ್ತಕದ ವಿಷಯಗಳಿಗೆ ಸೀಮಿತವಾಗದೆ ತಾವು ಕಲಿತದ್ದನ್ನು ಪ್ರಾಯೋಗಿಕವಾಗಿ ಬಳಸಿ ಅದನ್ನು ಸಮಾಜದ ಉನ್ನತಿಗೆ ಉಪಯೋಗಿಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗವು ಏರ್ಪಡಿಸಿದ್ದ ವಿಕಸಿತ ಗ್ರಾಮ ಎನ್ನುವ ಪರಿಕಲ್ಪನೆಯ ಪ್ರಾಜೆಕ್ಟ್ ಗಳ ಪ್ರದರ್ಶನ ತಂತ್ರೋತ್ಸವ-2026ಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸೃಜನಶೀಲತೆ ಮತ್ತು ನಾವೀನ್ಯತೆಗಳ ಅನಾವರಣಕ್ಕೆ ಇಂತಹ ಪ್ರದರ್ಶನಗಳು ಸಹಕಾರಿಯಾಗುತ್ತದೆ ಎಂದೂ ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ಮಾತನಾಡಿ ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಪ್ರತಿಯೊಂದು ಮಾಡೆಲ್ಗಳ ಹಿಂದೆ ವಿದ್ಯಾರ್ಥಿಗಳ ಯೋಚನೆ ಮತ್ತು ಯೋಜನೆಗಳಿವೆ. ಪರಿಸರ ಸ್ನೇಹಿ ತಂತ್ರಜ್ಞಾನದಿಂದ ಹಿಡಿದು ರೋಬೋಟಿಕ್ಸ್ವರೆಗಿನ ಪ್ರಾಜೆಕ್ಟ್ಗಳನ್ನು ತಯಾರಿಸಿ ತಮ್ಮ ಆಲೋಚನೆಗಳನ್ನು ವಾಸ್ತವಿಕ ರೂಪಕ್ಕೆ ತಂದಿದ್ದಾರೆ. ಈ ವಿದ್ಯಾರ್ಥಿಗಳ 5 ಯೋಜನೆಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರದರ್ಶನಕ್ಕೆ ಆಯ್ಕೆಗೊಂಡಿವೆ ಎಂದು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಸಂಯೋಜಕಿ ಡಾ.ರಾಜೇಶ್ವರಿ.ಕೆ ವಿಭಾಗದ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದರ ಯಶಸ್ಸಿಗೆ ಶ್ರಮಿಸಿದ್ದು ಎಲ್ಲರೂ ಅಭಿನಂದನಾರ್ಹರು ಎಂದರು. ಇತ್ತೀಚೆಗೆ ಬೈಂದೂರು ಮತ್ತು ಸುಳ್ಯದಲ್ಲಿ ನಡೆದ ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಎಪ್ರಿಲ್ 16 ರಂದು ಎಂಸಿಎ ವಿಭಾಗದ ಆಶ್ರಯದಲ್ಲಿ ಬಿಸಿಎ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ನಡೆಯಲಿರುವ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ಆಂತರ್ಯ-2 ಇದರ ಭಿತ್ತಿಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಇದರ ಬಗ್ಗೆ ಪೂರಕ ಮಾಹಿತಿಯನ್ನು ನೀಡಿದ ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜ್ಯೋತಿಮಣಿ .ಕೆ. ಅವರು ಈ ಉತ್ಸವವು ಐಡಿಯೇಶನ್, ಐಟಿ ಕ್ವಿಜ್, ಐಟಿ ಮೆನೇಜರ್, ಗೇಮಿಂಗ್, ಕೋಡಿಂಗ್, ವೆಬ್ ವಿನ್ಯಾಸ, ರೀಲ್ಸ್ ತಯಾರಿಕೆ, ಟ್ರೆಜರ್ ಹಂಟ್ ಮತ್ತು ನೃತ್ಯ ಹೀಗೆ 9 ಆಕರ್ಷಕ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಈ ಉತ್ಸವವು ವಿದ್ಯಾರ್ಥಿಗಳ ಬಹುಮುಖೀ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದ್ದು, ಬಿಸಿಎ ಮತ್ತು ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ವಿದ್ಯಾರ್ಥಿನಿ ಮೇಘನಾ ಕಾರ್ಯಕ್ರಮ ನಿರ್ವಹಿಸಿದರು.
ಒಟ್ಟು 30 ಮಾದರಿಗಳು ಇಲ್ಲಿ ಪ್ರದರ್ಶನಗೊಂಡವು. ಸುತ್ತಮುತ್ತಲಿನ ಕಾಲೇಜುಗಳ ಬಿಸಿಎ ಮತ್ತು ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು.







