ಚಾತುರ್ಮಾಸ್ಯ ಗುರು-ಶಿಷ್ಯರ ಪಾಲಿಗೆ ಮಹತ್ವದ್ದು: ರಾಘವೇಶ್ವರ ಶ್ರೀ…

ಗೋಕರ್ಣ: ಚಾತುರ್ಮಾಸ್ಯ ಗುರುಗಳಿಗೆ ಜಪಾನುಷ್ಠಾನಕ್ಕೆ ಅಂದರೆ ಪುಣ್ಯಸಂಚಯನಕ್ಕೆ ಉತ್ತಮ ಕಾಲವಾದರೆ, ಶಿಷ್ಯರ ಪಾಲಿಗೆ ಗುರುಚೈತನ್ಯ ಪಡೆಯಲು ಒಳ್ಳೆಯ ಕಾಲ. ನೂರಾರು ಮಂದಿ ಸಮೂಹವಾಗಿ ಮಠಕ್ಕೆ ಬರಲು ಚಾತುರ್ಮಾಸ್ಯ ಅವಕಾಶ ಕಲ್ಪಿಸುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ಕುಮಟಾ ಮಂಡಲದ ವಾಲಗಳ್ಳಿ, ಕೆಕ್ಕಾರು, ಧಾರೇಶ್ವರ, ಕುಮಟಾ ಮತ್ತು ಕಾರವಾರ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ಪ್ರತಿಯೊಂದು ಕಾರ್ಯಕ್ಕೂ ಸುಮೂರ್ಹ ಹಾಗೂ ಧುರ್ಮೂರ್ತವೂ ಇರುತ್ತದೆ. ಏಳಲು ಬ್ರಾಹ್ಮೀಕಾಲ, ಪೂಜೆಗೆ ಸಂಘವ ಕಾಲ ಶ್ರೇಷ್ಠ. ಗುರುದರ್ಶನಕ್ಕೆ ಎಲ್ಲ ಕಾಲವೂ ಪ್ರಶಸ್ತವೇ ಆದರೂ ಗುರುಶಿಷ್ಯರ ಸಮಾಗಮಕ್ಕೆ ಅತ್ಯಂತ ಯೋಗ್ಯ ಕಾಲ ಚಾತುರ್ಮಾಸ್ಯ. ಚಾತುರ್ಮಾಸದಲ್ಲಿ ಒಂದು ದಿನವಾದರೂ ಬಂದು ದರ್ಶನ ಮಾಡಿದರೆ, ಶಿಷ್ಯತ್ವಕ್ಕೆ ಅರ್ಥ ಬರುತ್ತದೆ.
ತಲೆಮಾರುಗಳಿಂದ ಒಳ್ಳೆಯ ಗುರುಸೇವಕರಿಗೆ ಹೆಸರಾದ ಪ್ರದೇಶ ಇದು. ನಿಮ್ಮ ಉದ್ಧಾರಕ್ಕೆ, ಶ್ರೇಯಸ್ಸಿಗೆ, ಆಯಸ್ಸಿಗೆ ಗುರುಸೇವೆ ಅತ್ಯಂತ ಶ್ರೇಷ್ಠ. ಒಳ್ಳೆಯ ಗುರುಸೇವಕರು ಎಂಬ ಖ್ಯಾತಿಯನ್ನು ಉಳಿಸಿಕೊಳ್ಳಬೇಕು. ಹೊಸ ಸೇವಾ ತಂಡದ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು ಎಂದು ಸೂಚಿಸಿದರು.
ಇಂದು 63 ವೈದಿಕರು ರುದ್ರಪಠಣ ಮಾಡಿದ್ದಾರೆ. ಅಂತೆಯೇ ಪ್ರತಿ ಗುರುವಾರ ನಡೆಯುವ ಲಕ್ಷ ತುಳಸಿ ಅರ್ಚನೆಯಲ್ಲಿ ಕೂಡಾ ಕುಮಟಾ ಮಂಡಲದ ದೊಡ್ಡಸಂಖ್ಯೆಯ ಶಿಷ್ಯಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಮುಕ್ತಿಯಲ್ಲಿ ಆಸಕ್ತಿ ಇರುವವರು ಗುರು ಮತ್ತು ಹರಿಯ ನಡುವೆ ಯಾವ ವ್ಯತ್ಯಾಸವನ್ನೂ ಕಾಣಬಾರದು. ಈ ಕಾರಣದಿಂದ ಗುರುಪರಂಪರೆಯ ಪ್ರೀತ್ಯರ್ಥವಾಗಿ ಲಕ್ಷ ತುಳಸಿ ಅರ್ಚನೆ ನಡೆಯಲಿದೆ ಎಂದು ತಿಳಿಸಿದರು.
ದಿನಕ್ಕೊಂದು ಆಂಗ್ಲಪದ ಬಿಡುವ ಅಭಿಯಾನದಲ್ಲಿ, ಸಾಮಾನ್ಯವಾಗಿ ಬಳಕೆಯಲ್ಲಿರುವ ‘ಓಕೆ’ ಪದ ತ್ಯಜಿಸುವಂತೆ ಸಲಹೆ ಮಾಡಿದರು. ಆದರೆ ಇದರ ಮೂಲದ ಬಗ್ಗೆ ಇಂದಿಗೂ ಸೈದ್ಧಾಂತಿಕ ಹಿನ್ನಲೆ ಇಲ್ಲ. ಆದರೆ ಭಾರತೀಯ ಭಾಷೆಗಳು ಹೆಚ್ಚು ವೈಜ್ಞಾನಿಕ. ಆದ್ದರಿಂದ ಅರ್ಥಹೀನ ಪದದ ಬದಲು, ಒಪ್ಪಿಗೆ, ಸರಿ, ಆಯ್ತು, ಆಗಬಹುದು, ಹೌದು, ಪರವಾಗಿಲ್ಲ, ಆತು, ಅಕ್ಕು, ಅಡ್ಡಿಲ್ಲೆ ಎಂಬ ಪದಗಳನ್ನು ಬಳಸಬಹುದು ಎಂದು ವಿವರಿಸಿದರು.
ನಮ್ಮಲ್ಲಿ ಸಾಕಷ್ಟು ಪದ ಸಮೃದ್ಧಿ ಇರುವಾಗ ಬೇರೆ ಭಾಷೆಯ ದಾಸ್ಯ ಏಕೆ ಎಂದು ಪ್ರಶ್ನಿಸಿದರು. ಇದರ ಬದಲು ಸಂಸ್ಕೃತದ ಅಸ್ತು, ಬಾಡಂ ಪದ ಕೂಡಾ ಇದಕ್ಕೆ ಹೊಂದಿಕೆಯಾಗುತ್ತದೆ. ಸಂಸ್ಕೃತ ದಲ್ಲಿನ ಓಂ ಪದಕ್ಕೆ ಕೂಡಾ ಆಂಗೀಕಾರ ಎಂಬ ಅರ್ಥವಿದೆ. ಕೋಶಗಳೂ ಇದನ್ನು ಸಮರ್ಥಿಸುತ್ತವೆ ಎಂದು ವಿಶ್ಲೇಷಿಸಿದರು.
ಸಮಾಜಕ್ಕೆ ಸ್ವಭಾಷಾ ಅಭಿಯಾನ ಪ್ರೇರಣೆ ನೀಡಲಿ. ಆದಷ್ಟು ಆಂಗ್ಲಪದಗಳ ಬಳಕೆ ಬಿಟ್ಟುಬಿಡಿ. ಸರಿಯಾದ ಕನ್ನಡ ಮಾತನಾಡಲು ಒತ್ತು ನೀಡಿ ಎಂದು ಸೂಚಿಸಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಉಪಾಧ್ಯಕ್ಷ ಜಿ.ಎಸ್.ಹೆಗಡೆ, ವೈದಿಕ ಪ್ರಧಾನ ವಿನಾಯಕ ಭಟ್, ಕುಮಟಾ ಮಂಡಲದ ಅಧ್ಯಕ್ಷ ಸೀತಾರಾಮ ವೆಂಕಟರಮಣ ಹೆಗಡೆ ಭದ್ರನ್, ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಚಾತುರ್ಮಾಸ್ಯ ತಂಡದ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಶ್ರೀಸವಾರಿಯ ರಾಘವೇಂದ್ರ ಮಧ್ಯಸ್ಥ, ಜಿ.ಕೆ.ಮಧು, ಎಂಜಿನಿಯರ್ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು.
ಕಡತೋಕ ಸ್ವಯಂಭೂ ದೇವಾಲಯ, ಬಟ್ಟೆ ವಿನಾಯಕ ದೇವಸ್ಥಾನ ಮತ್ತು ರಘೂತ್ತಮ ಮಠದಿಂದ ಪಾದಪೂಜೆ ನಡೆಯಿತು. ಶ್ರೀಚಂದ್ರಮೌಳೀಶ್ವರ ದೇವರಿಗೆ ಶತರುದ್ರಾಭಿಷೇಕ ನೆರವೇರಿತು.

Related Articles

Back to top button