ಸಜೀಪನಡು ಕಂಚಿನಡ್ಕ ಅವೈಜ್ಞಾನಿಕ ಘನತ್ಯಾಜ್ಯ ಘಟಕದ ಅವ್ಯವಸ್ಥೆ – ಘಟಕಕ್ಕೆ ಬೀಗ ಜಡಿದ ಶಾಸಕ ಯು.ಟಿ.ಖಾದರ್…

ಬಂಟ್ವಾಳ: ಬಂಟ್ಟಾಳ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ ಬಂಟ್ವಾಳ ಹೊರ ವಲಯದ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ 2007ರಲ್ಲಿ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ ಘಟಕ ನಿರ್ಮಾಣ ಮಾಡಲು ಸ್ಥಳೀಯರ ಭಾರೀ ವಿರೋಧ ವ್ಯಕ್ತವಾಗಿತ್ತು.ಆದರೆ ಹೊಸ ಸರಕಾರ ಬಂದ ನಂತರ ಅದೇ ಸ್ಥಳದಲ್ಲಿ ಘನತ್ಯಾಜ್ಯ ತೆರೆಯುವ ಬಗ್ಗೆ ಸದನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಒತ್ತಾಯಿಸಿದಾಗ ಸ್ಥಳೀಯ ಶಾಸಕ ಯು.ಟಿ.ಖಾದರ್ ರವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ನಂತರ ಸ್ಪೀಕರ್ ಹಾಗೂ ಸಚಿವರು ಮದ್ಯೆ ಪ್ರವೇಶಿಸಿ ಜಿಲ್ಲಾಡಳಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.
ಅದರಂತೆ ಅಂದಿನ ಜಿಲ್ಲಾಧಿಕಾರಿಗಳಾದ ಸಿಂಧೂ ರೂಪೇಶ್, ಶಾಸಕರೂ ಸೇರಿದಂತೆ ಸಹಾಯಕ ಕಮೀಷನರ್ ,ಮಂಗಳೂರು ತಹಶೀಲ್ದಾರ್,ಬಂಟ್ಟಾಳ ತಹಶೀಲ್ದಾರ್,ಬಂಟ್ಟಾಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಜೀಪನಡು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದು ಕೇವಲ ಒಣಕಸ ಮಾತ್ರ ಹಾಕಲು
ನಿರ್ಧಾರಕ್ಕೆ ಬರಲಾಯಿತು. ಅದರಿಂದ ಬರುವ ಆದಾಯವನ್ನು ಸ್ಥಳೀಯ ಪಂಚಾಯತ್ ಗೆ ನೀಡುವ ಒಪ್ಪಂದ ನಡೆಸಿ ಬಂಟ್ವಾಳ ಪುರಸಭೆಗೆ ಸೂಚನೆ ನೀಡಲಾಯಿತು.ನಂತರ ಕೆಲ ಸಮಯಗಳ ಕಾಲ ಕೇವಲ ಒಣಕಸ ಮಾತ್ರ ತಂದು ಅದನ್ನು ವಿಲೇವಾರಿ ಮಾಡುವ ಕೆಲಸ ಚಾಲ್ತಿಯಲ್ಲಿತ್ತು. ಆದರೆ ಕ್ರಮೇಣ ಹಸಿ ಕಸ ಕೂಡಾ ತರಲು ಪ್ರಾರಂಭಿಸಿ, ಸತ್ತ ಪ್ರಾಣಿಗಳನ್ನು ಸಮೇತ ತಂದು ಸುರಿದು ಪಚ್ಟನಾಡಿ ತರಹ ಆಗಿ ಯಾರೂ ಕೇಳದ ಪರಿಸ್ಥಿತಿಗೆ ಬಂದು ದಿಕ್ಕು ದೆಸೆಯಿಲ್ಲದಂತಾಗಿತ್ತು.

ಈ ಬಗ್ಗೆ ಸ್ಥಳೀಯ ನಾಗರೀಕರು ಮತ್ತೆ ಶಾಸಕ ಯು.ಟಿ.ಖಾದರ್ ರವರ ಬಳಿ ತಮ್ಮ ಅಹವಾಲು ತಿಳಿಸಿದಾಗ ಶಾಸಕರು  ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸ್ಥಳೀಯರ ನಾಗರೀಕರ ಬಗ್ಗೆ ಕಿಂಚಿತ್ತೂ ಕರುಣೆ ಕಾಳಜಿ ವಹಿಸದೆ ಬಂಟ್ವಾಳ ಪುರಸಭೆಯವರು ಬೇಕಾ ಬಿಟ್ಟಿ ತ್ಯಾಜ್ಯ ಸುರಿಯುತ್ತಿರುವ ಘಟನೆ ಕಣ್ಣಾರೆ ಕಂಡು ದುರ್ವಾಸನೆ ಹಾಗೂ ಅವ್ಯವಸ್ಥೆಯಿಂದ ಸ್ಥಳೀಯ ನಾಗರಿಕರ ಮೇಲಾಗುವ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶಾಸಕ ಯು.ಟಿ.ಖಾದರ್ ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳು,ಬಂಟ್ವಾಳ ಶಾಸಕರು,ಪುರಸಭೆ ಮುಖ್ಯಾಧಿಕಾರಿ,ಪುರಸಭೆ ಅಧ್ಯಕ್ಷರನ್ನೂ ಸಂಪರ್ಕಿಸಿದ ಶಾಸಕ ಯು.ಟಿ.ಖಾದರ್ ಘಟಕದ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆದಷ್ಟು ಬೇಗನೇ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದರು.ಮುಂದಕ್ಕೆ ಯಾವುದೇ ಕಾರಣಕ್ಕೂ ಹಸಿ ಕಸ ತರಲು ಅನುಮತಿ ನೀಡಬಾರದೆಂದು ನಿರ್ಧರಿಸಿ ಇದನ್ನು ನೋಡಿಕೊಳ್ಳಲು ಸ್ಥಳೀಯರ ಕಾವಲು ಸಮಿತಿಯನ್ನು ಕೂಡಾ ನೇಮಿಸಲಾಯಿತು.

IMG 20220629 WA0004 300x225 IMG 20220629 WA0003 300x168 IMG 20220629 WA0002 300x169

Related Articles