ಏಳದೆ ಮಂದಾರ ರಾಮಾಯಣದಲ್ಲಿ ತುಳು ರಾಮಾಯಣದ ಎಸಳುಗಳು…

ಮೂಡಬಿದಿರೆ: ‘ತುಳು ಭಾಷೆಯ ಸಹಜ ಶೈಲಿಯಲ್ಲಿ ಸಮಗ್ರ ರಾಮಾಯಣವನ್ನು ರಚಿಸಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ನಮ್ಮ ಗ್ರಾಮೀಣ ಬದುಕಿನ ಸೊಗಡನ್ನು ಎಳೆ ಎಳೆಯಾಗಿ ಚಿತ್ರಿಸಿದ್ದಾರೆ. ಅವರ ಕಾವ್ಯದಲ್ಲಿರುವ 22 ಎಸಳುಗಳನ್ನು ಏಳು ಭಾಗಗಳಲ್ಲಿ ಏಳದೆ ಮಂದಾರ ರಾಮಾಯಣ – ವಾಚನ ಮತ್ತು ವ್ಯಾಖ್ಯಾನದ ಮೂಲಕ ಪರಿಚಯಿಸಲಾಗುತ್ತಿದೆ’ ಎಂದು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ತುಳು ವರ್ಲ್ಡ್ ಮಂಗಳೂರು, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡಬಿದಿರೆ, ತುಳುಕೂಟ ಬೆದ್ರ ಹಾಗೂ ಮಂದಾರ ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮೂಡಬಿದಿರೆ ಜೈನಮಠದ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ಏರ್ಪಡಿಸಿದ ‘ಏಳದೆ ಮಂದಾರ ರಾಮಾಯಣ: ಸುಗಿಪು-ದುನಿಪು’ ಕಾರ್ಯಕ್ರಮದಲ್ಲಿ ಸಪ್ತಾಹದ ಸಂಯೋಜಕರಾಗಿ ಅವರು ಮಾತನಾಡಿದರು.
ಲಲಿತ ಛಂದಸ್ಸಿನಲ್ಲಿ ಬರೆದ ಮಂದಾರ ರಾಮಾಯಣದ ಕನ್ನಡ ರೂಪಾಂತರವನ್ನು ಸ್ವತಹ ಕೇಶವ ಭಟ್ಟರೇ ಮಾಡಿರುವುದರಿಂದ ಪರಿಚಯಾತ್ಮಕವಾಗಿ ಕನ್ನಡದ ಕೆಲವು ಸಾಲುಗಳನ್ನೂ ವಾಚನ-ವ್ಯಾಖ್ಯಾನಗಳಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದವರು ನುಡಿದರು. ಜೈನಮಠದ ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಸಾನಿಧ್ಯ ವಹಿಸಿದ್ದರು.
ರಾಮಾಯಣದ ಬಾಲಕಾಂಡದಲ್ಲಿ ಬರುವ ‘ಪುಂಚದ ಬಾಲೆ,ಬಂಗಾರ್ದ ತೊಟ್ಟಿಲ್, ಅಜ್ಜೇರೆ ಸಾಲೆ, ಮದಿಮೆದ ದೊಂಪ,ಸೇಲೆದ ಸೋಲು ಈ ಐದು ಎಸಳುಗಳ ಆಯ್ದ ಭಾಗಗಳನ್ನು ಯಕ್ಷಗಾನ ಭಾಗವತೆ ಅಮೃತ ಅಡಿಗ ವಾಚಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದರು. ಕೌಶಲ್ ರಾವ್ ಪುತ್ತಿಗೆ ಮದ್ದಳೆ ನುಡಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ.ಮಂದಾರ ರಾಜೇಶ್ ಭಟ್ ಸ್ವಾಗತಿಸಿದರು, ತುಳು ವರ್ಲ್ಡ್ ಅಧ್ಯಕ್ಷ ಡಾ ರಾಜೇಶ್ ಆಳ್ವ ನಿರೂಪಿಸಿದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಮೋದ್ ಸಪ್ರೆ ವಂದಿಸಿದರು.

ಏಳದೆ: ಕಾವ್ಯ ಪ್ರಸ್ತುತಿ
ಜುಲೈ 31 ರಿಂದ ಆಗಸ್ಟ್ 6ರವರೆಗೆ ಪ್ರತಿದಿನ ಅಪರಾಹ್ನ ನಡೆಯುವ ಪ್ರವಚನ ಸಪ್ತಾಹದಲ್ಲಿ ಕ್ರಮವಾಗಿ ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರಕಾಂಡ, ಯುದ್ದಕಾಂಡ ಮತ್ತು ಉತ್ತರಕಾಂಡ ಭಾಗಗಳಾಗಿ ವಿಂಗಡಿಸಿ ಮಂದಾರ ರಾಮಾಯಣ ಕಾವ್ಯವನ್ನು ವಾಚನ – ವ್ಯಾಖ್ಯಾನ ಮೂಲಕ ಪ್ರಸ್ತುತಪಡಿಸಲಾಗುವುದು. ಇದರಲ್ಲಿ ಹೆಸರಾಂತ ಗಾಯಕರು ಮತ್ತು ವಿದ್ವಾಂಸರು ಭಾಗವಹಿಸಲಿದ್ದಾರೆ.

IMG 20220802 WA0013 300x212

IMG 20220802 WA0012 300x135

IMG 20220802 WA0015 300x169

Related Articles