ನ.11-17: ಯಕ್ಷಾಂಗಣ ತಾಳಮದ್ದಳೆ ಸಪ್ತಾಹ -ವಿವಿಧ ತಂಡಗಳ ಸಂಯೋಜನೆಯಲ್ಲಿ ವಿಭಿನ್ನ ಪ್ರಯೋಗ…

ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಎಂದಿನಂತೆ ಈ ಬಾರಿಯೂ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲಿರುವ 12ನೇ ವರ್ಷದ ನುಡಿಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹ ‘ದ್ವಾದಶ ಸರಣಿ’ಯು ಇದೇ 2024 ನವೆಂಬರ್ ತಿಂಗಳ 11ರಿಂದ 17ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯಲಿದೆ.
ಜಿಲ್ಲೆಯ ವಿವಿಧ ತಂಡಗಳ ಸಂಯೋಜನೆಯಲ್ಲಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಇತ್ತೀಚೆಗೆ ಕದ್ರಿ ದೇವಳದ ವಠಾರದಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿ ಮಾತನಾಡಿದರು. ‘ನವಂಬರ 11 ರಂದು ಸೋಮವಾರ ಸಂಜೆ ಗಂಟೆ 4ಕ್ಕೆ ಉದ್ಘಾಟನೆ ಯೊಂದಿಗೆ ಆರಂಭವಾಗುವ ಸಪ್ತಾಹದಲ್ಲಿ ಜಿಲ್ಲೆಯ ಹೆಸರಾಂತ ಏಳು ಯಕ್ಷಗಾನ ಕಲಾಸಂಘಗಳು ಭಾಗವಹಿಸಲಿದ್ದು, ಈಗಾಗಲೇ ತಾಳಮದ್ದಳೆ ಕ್ಷೇತ್ರದಲ್ಲಿ ಖ್ಯಾತರಾದ ಹಿರಿಯ ಯಕ್ಷಗಾನ ಕಲಾವಿದರನ್ನು ಬಳಸಿಕೊಂಡು ವಿವಿಧ ಪ್ರಸಂಗಗಳನ್ನು ಪ್ರಸ್ತುತಪಡಿಸಲಿವೆ’ ಎಂದವರು ತಿಳಿಸಿದರು.
ಭಾಗವಹಿಸುವ ಕಲಾ ಸಂಘಗಳು:
‘ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಮೂಡಿ ಬರುವ ದ್ವಾದಶ ಸರಣಿಯಲ್ಲಿ ಕ್ರಮವಾಗಿ ಹವ್ಯಾಸಿ ಬಳಗ ಕದ್ರಿ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾಸಂಘ ಉಪ್ಪಿನಂಗಡಿ ,ಯಕ್ಷಲಹರಿ ಕಿನ್ನಿಗೋಳಿ, ಅಂಬುರಹ ಯಕ್ಷ ಸದನ ಬೊಟ್ಟಿಕೆರೆ, ಶ್ರೀ ಚಾಮುಂಡೇಶ್ವರಿ ಯಕ್ಷಕೂಟ ಕಣಿಯೂರು ಕನ್ಯಾನ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡಗಳು ಭಾಗವಹಿಸಲಿವೆ. ಸಪ್ತಾಹದಲ್ಲಿ ಪ್ರತಿವರ್ಷದಂತೆ ಅಗಲಿದ ಹಿರಿಯ ಕಲಾವಿದರ ಸಂಸ್ಮರಣೆ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನಗಳೂ ಜರಗಲಿವೆ’ ಎಂದು ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಮಾಹಿತಿ ನೀಡಿದರು.
ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕ ಕೆ.ರವೀಂದ್ರ ರೈ ಕಲ್ಲಿಮಾರ್, ಕೋಶಾಧಿಕಾರಿ ಸುಮಾ ಪ್ರಸಾದ್, ಕಾರ್ಯದರ್ಶಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ನಿವೇದಿತಾ ಎನ್. ಶೆಟ್ಟಿ ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.

img 20241001 wa0028

Sponsors

Related Articles

Back to top button