ಎಡನೀರು ಸ್ವಾಮೀಜಿಗೆ ಹಾಗೂ ಶ್ರೀ ಮಠಕ್ಕೆ ರಕ್ಷಣೆ ನೀಡಿ-ಕೈಯೂರು ನಾರಾಯಣ ಭಟ್ ಆಗ್ರಹ…

ಬಂಟ್ವಾಳ : ಸುಮಾರು 1300 ವರ್ಷಗಳ ಇತಿಹಾಸವಿರುವ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕಾರಿಗೆ ದುಷ್ಕರ್ಮಿಗಳು ತಡೆಯೊಡ್ಡಿ ಅಡ್ಡಿಪಡಿಸಿದ ಕಿಡಿಗೇಡಿ ಕೃತ್ಯ ಖಂಡನೀಯ ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅವರು ಬಿಸಿರೋಡ್ ನ ಪತ್ರಿಕಾ ಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಎಡನೀರು ಮಠದ ಭಕ್ತಾಭಿಮಾನಿಗಳ ಬಳಗ ಬಂಟ್ವಾಳ ಇವರು ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಸರಗೋಡು ಎಡನೀರು ಮಠವು ತನ್ನದೇ ಆದ ವಿಶಿಷ್ಠ ಪರಂಪರೆ ಹೊಂದಿದ್ದು ಎಲ್ಲಾ ಜಾತಿ,ಮತ,ಸಂಪ್ರದಾಯಗಳನ್ನು ಗೌರವಿಸುವ ಹಿನ್ನೆಲೆ ಹೊಂದಿದೆ. ಮುಖ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಸ್ವಾಮೀಜಿಯವರು ತೆರಳುತ್ತಿರುವುದನ್ನು ಕಂಡು ದುರುದ್ದೇಶ ಪೂರ್ವಕವಾಗಿ ಆಕ್ರಮಣಕಾರಿ ರೀತಿಯಲ್ಲಿ ಕಾರಿಗೆ ಹಾನಿಗೊಳಿಸಿ ಬೆದರಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಈ ಮಠಕ್ಕೆ ಮುಸಲ್ಮಾನರು ಸಹಿತ ದೇಶದ ವಿವಿಧೆಡೆ ಭಕ್ತರಿದ್ದು ಇಲ್ಲಿನ ಉತ್ಸವಾದಿಗಳಿಗೆ ದೇಣಿಗೆ ಹೊರೆಕಾಣಿಕೆ ಸಮರ್ಪಿಸುತಿದ್ದಾರೆ. ಲಕ್ಷಾಂತರ ಮಠದ ಅಭಿಮಾನಿಗಳಿಗೆ ಈ ಘಟನೆಯಿಂದ ಖೇದವಾಗಿದೆ ಎಂದು ತಿಳಿಸಿದರು. ಕನ್ನಡ ಭಾಷಾ ಸಾಹಿತ್ಯ,ಯಕ್ಷಗಾನ ಹಾಗೂ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀಗಳಿಗೆ ಮತ್ತು ಮಠಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಷ್ಠಾನದ ಕೋಶಾಧಿಕಾರಿ ಅನಾರು ಕೃಷ್ಣ ಶರ್ಮ,ಜಿಲ್ಲಾ ಪ್ರತಿನಿಧಿ ರಾಜಮಣಿ ರಾಮಕುಂಜ, ಬಂಟ್ವಾಳ ತಾಲೂಕು ಅಧ್ಯಕ್ಷ ಸುಬ್ರಾಯ ಮಡಿವಾಳ,ಕಾರ್ಯದರ್ಶಿ ಕೋಕಳ ರಾಮಕೃಷ್ಣ ನಾಯಕ್ ಹಾಗೂ ಡಾ.ಮಹಾಲಿಂಗ ಭಟ್,ನ್ಯಾಯವಾದಿ ರವೀಂದ್ರ ಕುಕ್ಕಾಜೆ, ಶೇಖರ ಮಂಚಿ ಉಪಸ್ಥಿತರಿದ್ದರು.