ಮಂಗಳೂರು ಆಕಾಶವಾಣಿಯಲ್ಲಿ’ಕೋಟಿ ಚೆನ್ನಯ’ ತುಳು ಯಕ್ಷಗಾನ…
ಮೇ 30 - ಜೂ.6: 2 ಕಂತುಗಳಲ್ಲಿ ಪ್ರಸಾರ...

ಮಂಗಳೂರು: ತುಳು ಯಕ್ಷಗಾನ ಪ್ರಸಂಗಗಳಿಗೆ ಹೆಬ್ಬಾಗಿಲು ತೆರೆದುಕೊಟ್ಟ ‘ಕೋಟಿ ಚೆನ್ನಯ’ ಪ್ರಸಂಗವು ತೆಂಕುತಿಟ್ಟಿನ ಹಲವು ಮೇಳಗಳ ಜನಪ್ರಿಯತೆಗೆ ಕಾರಣವಾಗಿದೆ. ನೂರು ವರ್ಷಗಳ ಹಿಂದೆ ಪಂದಬೆಟ್ಟು ವೆಂಕಟರಾಯರು ಬರೆದ ಈ ಪ್ರಸಂಗವು ಇದೀಗ ತಾಳಮದ್ದಳೆ ರೂಪದಲ್ಲಿ ಮಂಗಳೂರು ಆಕಾಶವಾಣಿಯಿಂದ ಈ ವಾರ ಪ್ರಸಾರವಾಗಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಇದನ್ನು ಎರಡು ಕಂತುಗಳಾಗಿ ಪ್ರಸ್ತುತಪಡಿಸುವರು.
ನ್ಯಾಯ ಚಾವಡಿ : ತಾಳಮದ್ದಳೆಯ ಮೊದಲನೇ ಭಾಗ ‘ನ್ಯಾಯ ಚಾವಡಿ’ ಮೇ 30 ರಂದು ಶುಕ್ರವಾರ ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ.
ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬ್ಳೆ, ಎಂ.ಕೆ ರಮೇಶಾಚಾರ್ಯ, ರಮೇಶ ಸಾಲ್ವಣ್ಕರ್, ಉಮೇಶಾಚಾರ್ಯ ಗೇರುಕಟ್ಟೆ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು; ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಭಾಗವಹಿಸಿದ್ದಾರೆ.
ಅಂಕೊದ ಕಲ:
ಪ್ರಸಂಗದ ಎರಡನೇ ಭಾಗ ‘ಅಂಕೊದ ಕಲ’ ಮುಂದಿನ ಶುಕ್ರವಾರ ಜೂನ್ 6 ರಂದು ರಾತ್ರಿ 9:30ಕ್ಕೆ ಪ್ರಸಾರವಾಗುವುದು. ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಈ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ಭಟ್ ಪಿ.ಎಸ್ ನಿರ್ಮಿಸಿ ಬಾನುಲಿ ಪ್ರಸಾರಕ್ಕೆ ಸಿದ್ಧಪಡಿಸಿದ್ದಾರೆ. ಚೈತನ್ಯ ಪ್ರಶಾಂತ್ ಧ್ವನಿ ಮುದ್ರಣದಲ್ಲಿ ಸಹಕರಿಸಿದ್ದಾರೆ ಎಂದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿಯ ಪ್ರಕಟಣೆ ತಿಳಿಸಿದೆ.