ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವಿ ಗೂನಡ್ಕ ಶಾಖೆ ವತಿಯಿಂದ ಗೂನಡ್ಕ ಪೇರಡ್ಕ ಮದ್ರಸಾದಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ…

ಸುಳ್ಯ: ಭಾರತದ ಅತಿ ದೊಡ್ಡ ವಿದ್ವಾಂಸ ಒಕ್ಕೂಟವಾದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ನೂರನೇ ಸ್ಥಾಪನಾ ದಿನದ ಪ್ರಯುಕ್ತ ಪೇರಡ್ಕ ಗೂನಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಗೂನಡ್ಕ ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವಿ ಗೂನಡ್ಕ ಪೇರಡ್ಕ ಶಾಖೆ ವತಿಯಿಂದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಅಹ್ಮದ್ ನಈಂ ಫೈಝಿ ಅಲ್ ಮಅಬರಿಯವರು ಸಂದೇಶ ನೀಡಿ ಮಾತನಾಡಿ, ಸಮಸ್ತವು ಕಳೆದ ನೂರು ವರ್ಷಗಳಿಂದ ಭಾರತೀಯ ಮುಸಲ್ಮಾನರ ಪರಂಪರಾಗತ ಆದರ್ಶ ಸರಣಿಯಾದ ಅಹ್ಲುಸ್ಸುನ್ನಃ ವಲ್ ಜಮಾಅಃದ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಅಪಾರ ಕೊಡುಗೆ ನೀಡಿದ ಸಾತ್ವಿಕರಾದ ವಿದ್ವಾಂಸರ ಒಕ್ಕೂಟವಾಗಿದೆ. ಸಮಸ್ತ ಮತ್ತು ಅದರ ಉಪ ಸಮಿತಿಗಳು ಮುಸ್ಲಿಂ ಸಮುದಾಯದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಸೀಮಾತೀತವಾಗಿದೆ ಎಂದು ಹೇಳಿ ಸಮಸ್ತದ ಶತ ವರ್ಷದ ಪ್ರಯಾಣದಲ್ಲಿ ಸಮರ್ಥ ನಾಯಕತ್ವ ನೀಡಿದ ಸಾತ್ವಿಕರನ್ನು ಸಂಕ್ಷಿಪ್ತವಾಗಿ ಸ್ಮರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್, ಸಮಸ್ತದ ಕಾರ್ಯ ಚಟುವಟಿಕೆಗಳ ಫಲವಾಗಿ ನಮ್ಮ ಪ್ರದೇಶಗಳಲ್ಲಿ ಇಂದು ಸಮೃದ್ಧವಾದ ಧಾರ್ಮಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಾಧ್ಯವಾಗಿದೆ. ಸಮಸ್ತದ ಚಟುವಟಿಕೆಗಳು ಇನ್ನೂ ತಲುಪದ ಪ್ರದೇಶಗಳಿಗೆ ಹೋಲಿಸಿದರೆ ಇದು ಮನದಟ್ಟಾಗುತ್ತದೆ. ಈ ವಿದ್ವಾಂಸ ಸಂಘಟನೆಯ ನೂರನೇ ವಾರ್ಷಿಕ ಅಂತಾರಾಷ್ಟ್ರೀಯ ಸಮಾವೇಶ ನಮ್ಮ ಸಮೀಪ ಜಿಲ್ಲೆಯಾದ ಕಾಸರಗೋಡಿನ ಕುನಿಯ ಎಂಬಲ್ಲಿ ನಡೆಯಲಿದ್ದು, ನಾವೆಲ್ಲರೂ ಅದರ ಯಶಸ್ಸಿಗೆ ನಮ್ಮಿಂದಾಗುವ ಸೇವೆ ಸಲ್ಲಿಸೋಣ ಎಂದು ಕರೆ ನೀಡಿ ಸಮಸ್ತದ ಪಂಡಿತರು ಸಂಪಾಜೆ, ಗೂನಡ್ಕ, ಪೇರಡ್ಕ,ಅರಂತೋಡು ಮತ್ತಿತರ ಭಾಗದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಹಿರಿಯ ವಿದ್ವಾಂಸರಾದ ಪುತ್ತಿರಿ ಉಮ್ಮರ್ಚ ತೆಕ್ಕಿಲ್, ಅಬ್ಬಾಸ್ ಉಸ್ತಾದ್ ಕುಂಬ್ಳೆ, ಡಾಕ್ಟರ್ ಕುಂಬೋಲ್ ಶಾಹ್ ಮುಸ್ಲಿಯರ್ ಅತೂರ್ ಮತ್ತು ಇತರ ಪಂಡಿತರ ಕೊಡುಗೆಯನ್ನು ಸ್ಮರಿಸಿದರು. ಎಂ.ಆರ್.ಡಿ.ಎ ಪೇರಡ್ಕ ಗೂನಡ್ಕ ಇದರ ಅಧ್ಯಕ್ಷರಾದ ಜನಾಬ್ ಜಿ.ಕೆ ಹಮೀದ್ ಗೂನಡ್ಕ ಶುಭಹಾರೈಸಿ ಮಾತನಾಡಿ, ಸಮಸ್ತದ ಸೇವೆಗಳನ್ನು ವರ್ಣಿಸಲಸಾಧ್ಯ ಸಮಸ್ತ ಮತ್ತು ಎಸ್ಕೆ ಎಸ್ಎಸ್ಎಫ್ ನಂತಹ ಸಂಘಟನೆಗಳು ಸಮಾಜದ ತಳಮಟ್ಟದಲ್ಲಿರುವ ವ್ಯಕ್ತಿಗಳನ್ನೂ ಪರಿಗಣಿಸಿ ಸರ್ವ ರೀತಿಯ ಸೇವೆಗಳನ್ನು ನೀಡುತ್ತಿವೆ ಎಂದು ಪ್ರಶಂಸಿಸಿದರು. ಮದ್ರಸಾ ಅಧ್ಯಾಪಕರಾದ ಹಾರಿಸ್ ಕಾಮಿಲ್ ಅಝ್ಹರಿ, ಶಾಕಿರ್ ಮುಸ್ಲಿಯಾರ್, ಜಮಾಅತ್ ಉಪಾಧ್ಯಕ್ಷರಾದ ಹನೀಫ್ ಟಿ.ಬಿ , ಪ್ರಧಾನ ಕಾರ್ಯದರ್ಶಿ ಉಮರ್ ಪಿ.ಕೆ ಗೂನಡ್ಕ, ಜಮಾಅತ್ ಸದಸ್ಯರಾದ ಅಲ್ತಾಫ್ ಗೂನಡ್ಕ, ಅಶ್ರಫ್ ತೆಕ್ಕಿಲ್ ಪೇರಡ್ಕ ಮುಂತಾದವರು ಉಪಸ್ಥಿತರಿದ್ದರು. ಎಸ್ಕೆ ಎಸ್ಎಸ್ಎಫ್ ಗೂನಡ್ಕ ಶಾಖೆ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತಿರಿ ಮೊಟ್ಟೆಂಗಾರ್ ಸ್ವಾಗತಿಸಿ ವಂದಿಸಿದರು.ನಂತರ ಸಿಹಿ ತಿಂಡಿ ವಿತರಿಸಲಾಯಿತು.