ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಪ್ರಥಮ ವರ್ಷದ ವಿದ್ಯಾರ್ಥಿಗಳ ಪುನಶ್ಚೇತನಾ ಕಾರ್ಯಕ್ರಮ…

ದೇಶದ ಶ್ರೀಮಂತ ಪರಂಪರೆಯನ್ನು ಅನುಸರಿಸಿದಾಗ ಉನ್ನತ ವ್ಯಕ್ತಿಯಾಗಿ ಹೊರಹೊಮ್ಮುವುದಕ್ಕೆ ಸಾಧ್ಯ-ಆಂಜನೇಯ ರೆಡ್ಡಿ...

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾ ನಮ್ಮ ದೇಶದ ಶ್ರೀಮಂತ ಪರಂಪರೆಯನ್ನು ಅನುಸರಿಸಿದಾಗ ಸಮಾಜದಲ್ಲಿ ಅವನೊಬ್ಬ ಉನ್ನತ ವ್ಯಕ್ತಿಯಾಗಿ ಹೊರಹೊಮ್ಮುವುದಕ್ಕೆ ಸಾಧ್ಯವಿದೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ, ಆ್ಯಂಟಿ ರ‍್ಯಾಗಿಂಗ್ ಸೆಲ್ ಮತ್ತು ಆ್ಯಂಟಿ ಡ್ರಗ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪುನಶ್ಚೇತನಾ ಕಾರ್ಯಕ್ರಮದಲ್ಲಿ ರ‍್ಯಾಗಿಂಗ್ ಮತ್ತು ಮಾದಕ ದ್ರವ್ಯ ಮುಕ್ತ ಜೀವನ ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಜೀವನದಲ್ಲಿ ಒಮ್ಮೆ ಪೊಲೀಸು ಕೇಸುಗಳಾದರೆ ಆತನ ಮುಂದಿನ ಜೀವನ ಕಠಿಣವಾಗುತ್ತದೆ. ಪಾಸ್ ಪೋರ್ಟ್, ವಿದೇಶ ಪ್ರಯಾಣ, ಉನ್ನತ ಕಂಪೆನಿಗಳಲ್ಲಿ ನೇಮಕಾತಿ, ಸರ್ಕಾರಿ ನೌಕರಿ ಮುಂತಾದವು ಸಾಧ್ಯವಾಗದೆ ಜೀವನ ದುರ್ಲಭವಾಗುತ್ತದೆ. ಇದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದರು. ಪ್ರತಿಯೊಂದು ವಿಷಯಗಳಿಗೂ ಶ್ರೇಷ್ಟ ದಾರ್ಶನಿಕರ ಜೀವನವನ್ನು ಉದಾಹರಿಸುತ್ತಾ ಅವರಂತೆ ನೀವಾಗಬೇಕು ಎಂದು ಹೇಳಿದರು. ವಿವಿಧ ದೂರುಗಳನ್ನು ಆಧರಿಸಿ ತಮ್ಮ ಅನುಭವಗಳನ್ನು ಎಳೆ ಎಳೆಯಾಗಿ ಹಂಚಿಕೊಂಡ ಅವರು ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆ, ರ್ಯಾಗಿಂಗ್, ಸೈಬರ್ ಕ್ರೈಂ ಗಳ ಬಗ್ಗೆ ಮಾಹಿತಿ ನೀಡಿದರು. ಮೊದಮೊದಲು ಮೋಜಿಗಾಗಿ ಪ್ರಾರಂಭವಾಗುವ ಮಾದಕ ದ್ರವ್ಯ ಸೇವನೆಯು ಮುಂದೆ ಬಿಟ್ಟಿರಲಾರದ ಚಟವಾಗಿ ಪರಿಣಮಿಸುತ್ತದೆ ಮತ್ತು ಇದು ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿದರೆ ಏನೂ ತೊಂದರೆಯಾಗದು. ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳಗಳು ಸಂಭವಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕು ಎಂದರು. ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು ಮತ್ತು ತಮ್ಮ ಹಾಗೂ ಇತರ ವಾಹನ ಸವಾರರ ಸುರಕ್ಷತೆಯೂ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು. ವಿದ್ಯಾರ್ಥಿಗಳು ಸನ್ನಡತೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು.
ಮೂಲವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಸ್ವಾಗತಿಸಿ, ಆ್ಯಂಟಿ ಡ್ರಗ್ ಸೆಲ್‍ನ ಸಂಯೋಜಕ ಪ್ರೊ.ಗೈಟನ್ ಲೋಬೋ ವಂದಿಸಿದರು. ಆ್ಯಂಟಿ ರ್ಯಾಗಿಂಗ್ ಸೆಲ್ ಸಂಯೋಜಕ ಪ್ರೊ.ನವೀನ್.ಎಸ್.ಪಿ ಪ್ರಸ್ತಾವನೆಗೈದರು. ಡಾ.ಶ್ವೇತಾಂಬಿಕಾ.ಪಿ ಕಾರ್ಯಕ್ರಮ ನಿರ್ವಹಿಸಿದರು.

induction programme anjaneya reddy1

induction programme anjaneya reddy2

Related Articles

Back to top button