ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಿವೇಕ ವೃಕ್ಷ ರಕ್ಷಾ ಅಭಿಯಾನ…

ಪುತ್ತೂರು:ಮರ ಬೆಳೆಸಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ವಿವೇಕ ವೃಕ್ಷ ರಕ್ಷಾ ಅಭಿಯಾನ ಎನ್ನುವ ವಿಶೇಷ ಪರಿಕಲ್ಪನೆಯ ಯೋಜನೆಯೊಂದನ್ನು ಪ್ರಾರಂಭಿಸಿದ್ದಾರೆ.

ಜನವರಿ ಫೆಬ್ರವರಿ ಆದರೆ ಸಾಕು ಅಬ್ಬಾ ಏನು ಸೆಕೆ ಎನ್ನುವ ಉದ್ಘಾರ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಎಪ್ರಿಲ್, ಮೇಯಲ್ಲಂತೂ ಕೇಳುವುದೇ ಬೇಡ. ಅತಿಯಾದ ಉಷ್ಣತೆ, ನೀರಿನ ಕೊರತೆಯಿಂದ ಹೈರಾಣಾಗಿ ಹೋಗುತ್ತೇವೆ. ಹೀಗೇ ಮುಂದುವರಿದರೆ ಭುವಿಯಲ್ಲಿ ಮಾನವನ ಬದುಕು ಇನ್ನೂ ದುಸ್ತರವಾಗಬಹುದಲ್ಲವೇ?.
ಪ್ರಕೃತಿಯ ಮೇಲಿನ ನಿರಂತರ ಅತ್ಯಾಚಾರ ಇದಕ್ಕೆಲ್ಲಾ ಮುಖ್ಯ ಕಾರಣ. ನೆಲ ಜಲದ ದುರ್ಬಳಕೆ, ಅಗಾಧ ಪ್ರಮಾಣದ ಪ್ಲಾಸ್ಟಿಕ್ ಬಳಕೆ, ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು. ಅದರಲ್ಲೂ ಮುಖ್ಯವಾಗಿ ಅಪಾರವಾದ ಅರಣ್ಯ ನಾಶ. ತನ್ನ ಸುಖಲೋಲುಪತೆಗೆ ಕಾಂಕ್ರೀಟು ಕಾಡನ್ನು ನಿರ್ಮಿಸುತ್ತಿರುವ ಮಾನವ ಮರಗಿಡಗಳನ್ನು ನಿರ್ಲಕ್ಷ್ಯವಾಗಿ ಕಡಿಯುತ್ತಿದ್ದಾನೆ. ಹಾಗಾಗಿ ಮರ ಬೆಳೆಸಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ನವೀನ ಯೋಜನೆಯೊಂದನ್ನು ರೂಪಿಸಿದ್ದಾರೆ.

ಓರ್ವ ವ್ಯಕ್ತಿ ಒಂದು ಗಿಡವನ್ನು ನೆಟ್ಟು ಅದರ ಜತೆ ಭಾವಚಿತ್ರವನ್ನು ತೆಗೆದುಕೊಂಡು ನಿಗದಿಪಡಿಸಿದ ಜಾಲತಾಣದಲ್ಲಿ ಅದನ್ನು ಹಂಚಿಕೊಳ್ಳಬೇಕು. ಜತೆಯಲ್ಲಿ ತನಗೆ ತಿಳಿದ 3 ಜನರನ್ನು ಗಿಡನೆಡುವ ಕಾರ್ಯಕ್ಕೆ ನೇಮಿಸಬೇಕು. ಆ 3 ಜನ ಒಂದೊಂದು ಗಿಡನೆಟ್ಟು ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದರ ಜತೆಯಲ್ಲಿ ಮತ್ತೆ ಮೂರು ಮೂರು ಜನರನ್ನು ನೇಮಿಸಬೇಕು. ಹೀಗೆ ಸರಪಳಿ ಮುಂದುವರಿಯುತ್ತಾ ಹೋಗುತ್ತದೆ. ತನ್ಮೂಲಕ ಇಳೆಯಲ್ಲಿ ಸಸ್ಯ ಸಂಪತ್ತು ಸಮೃದ್ಧಿಯಾಗಲಿದೆ. ಈ ಸರಪಳಿ ತುಂಡಾಗದಂತೆ ಮುಂದುವರಿಸುವಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಾರ್ವಜನಿಕರು ಕೈಜೋಡಿಸಬೇಕೆಂದು ವಿದ್ಯಾರ್ಥಿಗಳು ವಿನಂತಿಸಿದ್ದಾರೆ.
ಗಿಡದ ಜತೆಗೆ ನೀವು ತಮ್ಮ ಭಾವಚಿತ್ರಗಳನ್ನು #VCETGogreen ಈ ಹ್ಯಾಷ್‍ಟ್ಯಾಗ್ ಜತೆಗೆ ಇನ್ಸ್ಟಾಗ್ರಾಂನಲ್ಲಿ @vcet_puttur_official, ಫೇಸ್‍ಬುಕ್‍ @VCET Puttur ನಲ್ಲಿ ಹಂಚಿಕೊಳ್ಳುವಂತೆ ಅವರು ವಿನಂತಿಸಿದ್ದಾರೆ.

Sponsors

Related Articles

Back to top button