ಚಿಂತೆ ಮಾಡಬೇಡಿ, ಚಿಂತನೆ ಮಾಡಿ-ಕೈಯೂರು ನಾರಾಯಣ ಭಟ್…

ವರದಿ: ಜಯಾನಂದ ಪೆರಾಜೆ
ಬಂಟ್ವಾಳ: ಮಾನಸಿಕ ನೆಮ್ಮದಿ ಮನಸ್ಸಿನಲ್ಲಿದೆ. ಬ್ರಹ್ಮ ಸತ್ಯಂ ಜಗನ್ಮಿತ್ಯಂ ಎಂದು ಶಂಕಚಾರ್ಯರು ಹೇಳಿದ್ದಾರೆ. ಆತ್ಮ ಪರಮಾತ್ಮನ ಸ್ವರೂಪವೇ ಆಗಿದೆ.
ನಮ್ಮ ಕರ್ತವ್ಯ ತಿಳಿದು ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕು. ವೇದ ಅಂದರೆ ಒಳ್ಳೆಯದು. ಅದನ್ನು ತಿಳಿದು ಸ್ವೀಕರಿಸಬೇಕು. ಆಚರಿಸಬೇಕು. ಸೌಂದರ್ಯ ಲಹರಿಯಲ್ಲಿ ಹೇಳಿದಂತೆ ಕೆಟ್ಟ ಮಕ್ಕಳಿರಬಹುದು.ಕೆಟ್ಟ ತಾಯಿ ಇಲ್ಲ. ಶಂಕರರ ಅದ್ವೈತ ತತ್ವವನ್ನು ಸಾರ್ವತ್ರೀಕರಿಸಿದಾಗ ನಮ್ಮಲ್ಲಿ ಯಾವುದೇ ಭೇದ ಉಳಿಯುವುದಿಲ್ಲ ಎಂದು ಹಿರಿಯರ ಸೇವಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಕೈಯೂರು ನಾರಾಯಣ ಭಟ್ ಹೇಳಿದರು.
ಅವರು ಬಿ ಸಿ ರೋಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ವಠಾರದಲ್ಲಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಅಂಗವಾಗಿ ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಘಟಕ,ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನಾಗೇಶ ರಾವ್ , ಆರೋಗ್ಯ ಇಲಾಖಾ ನಿವೃತ್ತ ಅಧಿಕಾರಿ ಜಯರಾಮ ಪೂಜಾರಿ,ಅನಾರು ಕೃಷ್ಣ ಶರ್ಮ,ರಾಜಾರಾಮ ಐತಾಳ್ ಕಲ್ಲಡ್ಕ ಉಪಸ್ಥಿತರಿದ್ದರು.
ಪ್ರೊ. ರಾಜಮಣಿ ರಾಮಕುಂಜ ಉಪನ್ಯಾಸ ನೀಡಿದರು. ಶಂಕರಾಚಾರ್ಯರ ಶಂಕರ ತತ್ವಗಳಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರವಿದೆ. ಸಕಲವೂ ಬ್ರಹ್ಮಮಯವಾಗಿದೆ ಎಂಬುದನ್ನು ತಿಳಿಯಬೇಕು. ಅದ್ವೈತ ಎಂಬುದು ಎರಡಿಲ್ಲ ಒಂದೇ ಎಂಬ ಭಾವವನ್ನು ತಿಳಿಸುತ್ತದೆ. ಯಾವುದರಲ್ಲಿಯೂ ಭೇದವಿಲ್ಲ. ಬುದ್ಧಿಶಕ್ತಿಯಿಂದ ಸೃಷ್ಟಿಯ ರಹಸ್ಯಗಳನ್ನು ಅರಿತು ಕೊಳ್ಳುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ಆರಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಬಂಟ್ವಾಳ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾಮಕೃಷ್ಣ ಕೋಕಳ ವಂದಿಸಿದರು.ಜಗದೀಶ ಹೊಳ್ಳ ನಿರೂಪಿಸಿದರು.