ಡಿ.25 – ಡಾ.ಎಮ್. ಪ್ರಭಾಕರ ಜೋಶಿಯವರಿಗೆ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ಪ್ರದಾನ…

ಬಂಟ್ವಾಳ: ಹಿರಿಯ ವಿದ್ವಾಂಸ, ಅರ್ಥಧಾರಿ ಮತ್ತು ಸಂಶೋಧಕ ಡಾ.ಎಮ್ ಪ್ರಭಾಕರ ಜೋಶಿಯವರಿಗೆ ಡಿ.25 ರಂದು ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಮತ್ತು ಕ.ಸಾ.ಪ. ಬಂಟ್ವಾಳ ಇದರ ವತಿಯಿಂದ ನೀರ್ಪಾಜೆ ಭೀಮ ಭಟ್ಟ ಸಂಸ್ಮರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಅಪರಾಹ್ನ 3 ಗಂಟೆಗೆ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಕವಿ ಸುಬ್ರಾಯ ಭಟ್ ನೆಕ್ಕರೆಕಳಯ ನೀರ್ಪಾಜೆ ಸಂಸ್ಮರಣೆ ಮಾಡಲಿದ್ದು , ಹಿರಿಯ ಅರ್ಥಧಾರಿ ಜಬ್ಬಾರ್ ಸಮೊ ಡಾ. ಜೋಶಿಯವರ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂಧರ್ಭದಲ್ಲಿ ಎಮ್. ಗೋಪಾಲ ಕೃಷ್ಣ ಭಟ್ಟರ ಸ್ವಗತ ಮತ್ತು ಇತರ ಬರಹಗಳು ಹಾಗೂ ಮುಳಿಯ ತಿಮ್ಮಪ್ಪಯ್ಯನವರ ಪಶ್ಚಾತ್ತಾಪದ ಹವಿಗನ್ನಡ ರೂಪಾಂತರ, ರೇಶ್ಮಾ ಭಟ್ಟರ ಕಥಾ ವ್ಯವಕಲನ ಬಿಡುಗಡೆಗೊಳ್ಳಲಿದೆ.
ಈ ಪ್ರಯುಕ್ತ ಆಮಂತ್ರಣ ಪತ್ರವನ್ನು ಡಾ.ಜೋಶಿಯವರ ಮಂಗಳೂರಿನ ಮನೆಗೆ ತೆರಳಿ ಕ.ಸಾ.ಪ. ಅಧ್ಯಕ್ಷ ಕೆ.ಮೋಹನ್ ರಾವ್, ಕೋಶಾಧಿಕಾರಿ ಎಸ್.ಗಂಗಾಧರ ಭಟ್ ಕೊಳಕೆ, ಶಿವಶಂಕರ್, ಕೃಷ್ಣ ಶರ್ಮ ನೀಡಿ ಆಮಂತ್ರಿಸಿದರು.