ಎ.23: ಅತ್ತಾವರದಲ್ಲಿ ಧಾರ್ಮಿಕ ಕವಿಗೋಷ್ಠಿ – ಕಾವ್ಯ ಗಾಯನ ಅಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ…
ಮಂಗಳೂರು: ಅತ್ತಾವರ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶ ಪ್ರಯುಕ್ತ ಏಪ್ರಿಲ್ 23 ಗುರುವಾರ ಮಧ್ಯಾಹ್ನ ಗಂ.1ರಿಂದ ವಿಶಿಷ್ಟ ಧಾರ್ಮಿಕ ಕವಿಗೋಷ್ಠಿ ನಡೆಯಲಿದೆ. ಹಿರಿಯ ಕವಿ, ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಗೋಷ್ಠಿಯ ಅಧ್ಯಕ್ಷತೆ ವಹಿಸುವರು.
ಅತ್ತಾವರ ವೈದ್ಯನಾಥ ವೇದಿಕೆಯಲ್ಲಿ ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆಯು ಸಂಯೋಜಿಸಿರುವ ಕಾರ್ಯಕ್ರಮದಲ್ಲಿ ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್ ಅವರು ಗೋಷ್ಠಿಯಲ್ಲಿ ವಾಚಿಸುವ ಕವನಗಳನ್ನು ಸ್ವರ ಬದ್ಧಗೊಳಿಸಿ ಸಂಗಡಿಗರೊಂದಿಗೆ ಹಾಡುವರು.
ಭಾಗವಹಿಸುವ ಕವಿಗಳು:
ಸಮಾಜಕ್ಕೆ ಧಾರ್ಮಿಕ ಮತ್ತು ನೈತಿಕ ಸಂದೇಶ ನೀಡುವ ಸಲುವಾಗಿ ಏರ್ಪಡಿಸಲಾಗಿರುವ ಈ ಕವಿಗೋಷ್ಠಿಯಲ್ಲಿ ಧಾರ್ಮಿಕ ಮೌಲ್ಯಗಳಿಗೆ ಒತ್ತು ನೀಡುವ ಕವಿತೆಗಳನ್ನು ಜಿಲ್ಲೆಯ ಪ್ರಮುಖ ಕವಿಗಳು ವಾಚಿಸುವರು. ಕವಿಗಳಾಗಿ ಭಾಗವಹಿಸುವ ರಘು ಇಡ್ಕಿದು, ವ.ಉಮೇಶ್ ಕಾರಂತ, ಡಾ.ಎಸ್.ಎಂ.ಶಿವಪ್ರಕಾಶ್,
ಡಾ. ಮೀನಾಕ್ಷಿ ರಾಮಚಂದ್ರ , ಸುಧಾ ನಾಗೇಶ್ ಮತ್ತು ಮಾಲತಿ ಶೆಟ್ಟಿ ಮಾಣೂರು ತುಳು ಮತ್ತು ಕನ್ನಡ ಭಾಷೆಗಳಲ್ಲಿ ತಮ್ಮ ಕವನಗಳನ್ನು ಪ್ರಸ್ತುತ ಪಡಿಸುವರು.
ಗೀತ ಗಾಯನದಲ್ಲಿ ತೋನ್ಸೆ ಪುಷ್ಕಳ ಕುಮಾರ್ ಹಾಗೂ ವಿದುಷಿ ಲಾವಣ್ಯ ಸುಧಾಕರ್ ಭಾಗವಹಿಸುವರು. ಸತೀಶ್ ಸುರತ್ಕಲ್, ಕೌಶಿಕ್ ಮಂಜನಾಡಿ ,ವಂದನ್ ಬೇಕಲ್ ಹಿನ್ನೆಲೆ ಸಂಗೀತ ನೀಡುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿ.ಯನ್.ಆರ್ ಗೋಲ್ಡ್ ಬಂಟ್ವಾಳ ಮುಖ್ಯಸ್ಥರಾದ ನಾಗೇಂದ್ರ ಬಾಳಿಗ ಅವರು ಉಪಸ್ಥಿತರಿರುವರು ಎಂದು ಅಮೃತ ಪ್ರಕಾಶದ ಪ್ರಕಟಣೆ ತಿಳಿಸಿದೆ.




