ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪಕುಲಪತಿ ಭೇಟಿ…

ಪುತ್ತೂರು: ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷಾ ಶಿಕ್ಷಣಕ್ಕೆ ಮನ್ನಣೆಯನ್ನು ನೀಡಲಾಗುತ್ತಿದ್ದು, ಕರ್ನಾಟಕದಲ್ಲಿ ಕನ್ನಡದಲ್ಲೇ ಓದಿ ಇಂಜಿನಿಯರಿಂಗ್ ಪದವಿಯನ್ನು ಪಡೆಯಬಹುದು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪಕುಲಪತಿ ಮಾನ್ಯ ಡಾ.ವಿದ್ಯಾಶಂಕರ್.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಉಪನ್ಯಾಸಕರನ್ನು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು. ಎನ್‍ಇಪಿಯನ್ನು ಗಮನದಲ್ಲಿರಿಸಿಕೊಂಡು ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಲಾಗಿದ್ದು ಉಪನ್ಯಾಸಕರು ಹೊಸ ಹೊಸ ವಿಚಾರಗಳನ್ನು ಕಲಿಯುವುದು ಆವಶ್ಯವಾಗಿದೆ ಎಂದರು. ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇಂಡಸ್ಟ್ರಿಗಳು ಬಯಸುವ ರೀತಿಯಲ್ಲಿ ನೂತನ ಪಠ್ಯಕ್ರಮವನ್ನು ತಯಾರಿಸಲಾಗುತ್ತಿದ್ದು, ಪ್ರಥಮ ವರ್ಷದಿಂದಲೇ ವಿಭಾಗವಾರು ವಿಷಯಗಳು ಮತ್ತು ತಂತ್ರಜ್ಞಾನದ ಬೋಧನೆಗೆ ಒತ್ತು ನೀಡಲಾಗಿದೆ. ಕಾರಣಾಂತರದಿಂದ ಕಲಿಕೆಯ ಮಧ್ಯೆಯೇ ಪದವಿಯನ್ನು ತೊರೆದರೂ ಅದುವರೆಗಿನ ಕಲಿಕೆಗೆ ತಕ್ಕಂತೆ ಅವರಿಗೆ ಸರ್ಟಿಫಿಕೇಟುಗಳನ್ನು ಕೊಡುವ ಪದ್ದತಿಯನ್ನು ಜಾರಿಗೊಳಿಸಲಾಗುವುದು. ಪದವಿ ಪಡೆದು ಹೊರಬಂದ ಪ್ರತಿಯೊಬ್ಬನೂ ಕೂಡ ಸೂಕ್ತ ಉದ್ಯೋಗವನ್ನು ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು ಅನೇಕ ಪೂರಕ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ವಿಶ್ವವಿದ್ಯಾನಿಲಯವು ತರುವ ಬದಲಾವಣೆಗೆ ಕಾಲೇಜು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ ಮತ್ತು ಅಳವಡಿಸುಕೊಳ್ಳುವುದಕ್ಕೆ ಬದ್ದವಾಗಿದೆ. ಕಾಲೇಜಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಹೊಸ ಯೋಜನೆಗಳನ್ನು ಕಾಲೇಜು ಹಮ್ಮಿಕೊಂಡಿದ್ದು ವಿಶ್ವವಿದ್ಯಾನಿಲಯದ ಸಹಕಾರವನ್ನು ಬಯಸುತ್ತದೆ ಎಂದರು.
ಕಾಲೇಜಿನ ವತಿಯಿಂದ ನೂತನ ಉಪಕುಲಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ಮತ್ತು ಮೈಸೂರು ವಿಭಾಗದ ವಿಶೇಷಾಧಿಕಾರಿ ಡಾ.ಎಚ್.ಆರ್.ಶಿವಕುಮಾರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಶ್ರೀ.ಸತೀಶ್ ರಾವ್.ಪಿ, ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಶ್ರೀ ಸತ್ಯನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಸ್ವಾಗತಿಸಿದರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಶ್ರೀ.ಸತೀಶ್ ರಾವ್.ಪಿ ವಂದಿಸಿದರು. ಪ್ರೊ.ಲತಾ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

vc visit2
Sponsors

Related Articles

Back to top button