ಹಿತವಚನ ನೀಡುವಲ್ಲಿ ಸಹ ಮಾಯಾ ಜಾಲ ತಂತ್ರ ಉಪಯುಕ್ತ-ಪ್ರೊ ಮುಬೀನ ಪರವೀನ್ ತಾಜ್…

ಮಂಗಳೂರು, 11 ಏಪ್ರಿಲ್: ಮಂಗಳೂರಿನ ಬಜ್ಪೆಯಲ್ಲಿರುವ ಥಂಡರ್ ಗೈಸ್ ಬಳಗದ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ನಡೆಯುವ ಬೇಸಿಗೆ ಶಿಬಿರದಲ್ಲಿ ಪ್ರಥಮ ದಿನದಂದು ಮಕ್ಕಳಿಗೆ ನೀತಿ ಸಾರುವ ಎಜು ಮ್ಯಾಜಿಕ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮಂಗಳೂರಿನ ‘ಕಲಾಸೃಷ್ಟಿ’ ಬಳಗದ ಸಂಸ್ಥಾಪಕಿ, ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ, ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಪ್ರೊ. ಮುಬೀನಾ ಪರವೀನ್ ತಾಜ್ ಹಾಗೂ ಕಲಾಸೃಷ್ಟಿ ತಂಡದ ನಿರ್ದೇಶಕಿ, ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಕು. ಶಮಾ ಪರವೀನ್ ತಾಜ್ ಜಂಟಿಯಾಗಿ ಹಲವಾರು ನೀತಿಪ್ರದ ಮಾಯಾತಂತ್ರಗಳನ್ನು ಮಾಡಿ ಅವುಗಳನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟರು.
ಈ ಕಾರ್ಯಕ್ರಮವನ್ನು ಥಂಡರ್ ಗೈಸ್ ಸಂಸ್ಥೆಯ ಮುಖ್ಯಸ್ಥರಾದ ಸೂರಜ್ ಶೆಟ್ಟಿ ಹಾಗೂ ಮಂಗಳೂರಿನ ಕಣಚೂರು ಆಯುರ್ವೇದ ವೈದ್ಯಕೀಯ ವಿದ್ಯಾಲಯದ ವೈದ್ಯಕೀಯ ನಿರ್ದೇಶಕರು ಹಾಗೂ ಶಸ್ತ್ರಚಿಕಕಿತ್ಸಕರಾದ ಡಾ ಸುರೇಶ ನೆಗಳಗುಳಿಯವರು ವಿಶಿಷ್ಟ ವಿಧಾನದಲ್ಲಿ ಉದ್ಘಾಟನೆ ಮಾಡಿದರು.
ಸುಮಾರು ಐವತ್ತು ಚಿಣ್ಣರು ಉತ್ಸಾಹದಿಂದ ವೇದಿಕೆಯೇರಿ ಜಾದೂ ತಂತ್ರ ವೀಕ್ಷಿಸಿ, ಮಾಡಲು ಕಲಿತರು.
ಕೊನೆಯಲ್ಲಿ ಚಾಕೊಲೇಟ್ ಸೃಷ್ಟಿ ಮಾಡಿ ವಿಸ್ಮಯ ಜಾದೂ ಸಹಿತ ಕಾರ್ಯಕ್ರಮ ಸಂಪನ್ನವಾಯಿತು.