ಮಂಗಳೂರಿನಲ್ಲಿ ಮನೆ ಮನೆ ಕನ್ನಡ ಜಾಗೃತಿ ಅಭಿಯಾನಕ್ಕೆ ಚಾಲನೆ…
ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಸಲ್ಲದು-ಜಯಾನಂದ ಪೆರಾಜೆ...

ಮಂಗಳೂರು, ಜೂ.23 :ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿ ಯ ಅಭಿಮಾನ ಮೂಡಿಸುವ ಕೆಲಸ ನಿರಂತರ ನಡೆಯಬೇಕು. ಕನ್ನಡ ಪತ್ರಿಕೆಗಳು,ಸಾಹಿತ್ಯ ಕೃತಿಗಳು ಮನೆಮನೆಗೆ ತಲಪಬೇಕು.ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಸಲ್ಲದು ಎಂದು ಹಿರಿಯ ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆ ಹೇಳಿದರು.
ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಿತಾ ಶೆಣೈ ಕುಲಶೇಖರ ಮಂಗಳೂರು ಇವರ ಗೃಹದಲ್ಲಿಏರ್ಪಡಿಸಲಾದ ಮನೆಮನೆ ಕನ್ನಡ ಜಾಗೃತಿ ಅಭಿಯಾನದ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಅಭಿಯಾನದ ರೂವಾರಿ,ಸಂಸ್ಥೆಗಳ ಸ್ಥಾಪಕ ಸಂಚಾಲಕ ಡಾ.ವಾಮನ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ದಂಪತಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾ ಘಟಕ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಸಂಯೋಜಿಸಲಾದ ಕನ್ನಡ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಪರಿಚಾರಕ ಡಾ ಕೊಳ್ಚಪ್ಪೆ ಗೋವಿಂದ ಭಟ್ ವಹಿಸಿದ್ದರು.
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಪ್ರಾಸ್ತಾವಿಕ ಮಾತನಾಡಿ, ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ದ.ಕ ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅವರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿ ಅಭಿಯಾನಕ್ಕೆ ಶುಭ ಹಾರೈಸಿದರು. ಕನ್ನಡ ಪ್ರಜ್ಞೆ, ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಆತ್ಮಅಭಿಮಾನ ಮೋಡಿಸುವ ನಿಟ್ಟಿನಲ್ಲಿ ಕನ್ನಡ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಸಂಘಟಿಸಿ ಕನ್ನಡ ಪ್ರಜ್ಞೆ ಮೂಡಿಸಲು ಸಂಘಟನೆ ದುಡಿಯಲಿದೆ ಎಂದು ಅಧ್ಯಕ್ಷರು ಭಾಷಣದಲ್ಲಿ ನುಡಿದರು.
ಕಥಾಬಿಂದು ಪ್ರಕಾಶಕ ಪಿ.ವಿ.ಪ್ರದೀಪ್ ಕುಮಾರ್, ಕನ್ನಡ ಭವನದ ದ. ಕ. ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬ್ಳೆ, ನಿವೃತ್ತ ಆಕಾಶವಾಣಿ ನಿರ್ದೇಶಕ ಡಾ. ಶಿವಾನಂದ ಬೇಕಲ್ ಕನ್ನಡದ ಸಮಸ್ಯೆಗಳ ಬಗ್ಗೆ ಮಾತನಾಡಿದರು.ಪ್ರಾಯೋಜಕರಾದ ಕವಯತ್ರಿ ಅನಿತಾ ಶೆಣೈಯವರಿಗೆ ಈ ಸಂದರ್ಭದಲ್ಲಿ ಕನ್ನಡ ಭವನದ ಪ್ರತಿಷ್ಠಿತ ಕನ್ನಡ ಪಯಸ್ವಿನಿ ಪ್ರಶಸ್ತಿ 2025 ನ್ನು ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಪ್ರದಾನ ಮಾಡಿದರು.
ರಾಜ್ಯ ಸಂಚಾಲಕರಾದ ಡಾ. ಶಾಂತಾ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕೊಳಚಪ್ಪು ಸತ್ಯವತಿ ಭಟ್ ಕಸ್ತೂರಿ ಜಯರಾಮ್, ಶ್ರೀದೇವಿ ಭಂಡಾರಿ, ಗಾಯತ್ರಿ ಮನೋಹರ, ಅನಿತಾ ಶೆಣೈ, ಆರ್. ಎಂ. ಗ್ರೊಗೇರಿ, ಪ್ರತಿಭಾ ಸಾಲಿಯಾನ್ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ರೇಖಾ ಸುದೇಶ್, ಅಪೂರ್ವ ಕಾರಂತ ಕವಿತೆ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.