ಅನುಕಂಪ ಬೇಡ ಅವಕಾಶ ಕೊಡಿ – ಲ.ವಸಂತ ಶೆಟ್ಟಿ ….

ಬಂಟ್ವಾಳ: ವಿಶೇಷ ಚೇತನಾ ಮಕ್ಕಳಿಗೆ ಅನುಕಂಪ ಮಾತ್ರ ತೋರಿಸಿದರೆ ಸಾಲದು. ಅವರ ಸರ್ವಾಂಗೀಣ ಬೆಳವಣಿಗೆಗೆ ವಿವಿಧ ಚಟುವಟಿಕೆಗಳ ಮೂಲಕ ಅವಕಾಶ ಮಾಡಿಕೊಡಬೇಕು. ಬಂಟ್ವಾಳ ಲಯನ್ಸ್ ಕ್ಲಬ್ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಡೆಸಿಕೊಂಡು ಬರುತ್ತಿದೆ ಎಂದು ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಬಿ.ಸಿ.ರೊಡಿನಲ್ಲಿ ಮಂಗಳವಾರ ಲಯನ್ಸ್ ವಿಶೇಷ ಚೇತನಾ ಮಕ್ಕಳ ಪಾಲನಾ ಕೇಂದ್ರ, ಲಯನ್ಸ್ ಫಿಸಿಯೋತೆರಫಿ ಕೇಂದ್ರ ಬಿ.ಸಿ.ರೋಡು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಮಂಗಳವಾರ ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡಿನಲ್ಲಿ ಏರ್ಪಡಿಸಲಾದ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಜ್ಞಾನೇಶ್ ಎಮ್.ಪಿ. ಮಾತನಾಡಿದರು. ವಿಶೇಷ ಚೇತನಾ ಮಕ್ಕಳ ಲಾಲನೆ ಪಾಲನೆ ಹೆತ್ತವರಿಗೆ ಕಷ್ಟವಾಗಿದ್ದು ಲಯನ್ಸ್ ಮಕ್ಕಳ ಪಾಲನಾ ಕೇಂದ್ರದ ಮೂಲಕ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಹಾಗೂ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ಡಾ.ಬಿ.ವಸಂತ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಕಳೆದ 10 ವರ್ಷಗಳಿಂದ ವಿಶೇಷ ಚೇತನಾ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಲಯನ್ಸ್ ಸಂಸ್ಥೆಯ ಮೂಲಕ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಉಲ್ಲಾಸ್ ಐಸ್‍ಕ್ರೀಂ ಮಾಲಕ ಬಿ.ಹೆಚ್.ಉದಯ ಪೈ ಮೆಲ್ಕಾರ್,ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ರಾಧಾಕೃಷ್ಣ ಭಟ್, ಲಯನ್ಸ್ ಕ್ಲಬ್ ಕೋಶಾಧಿಕಾರಿ ದೇವಿಕಾ ದಾಮೋದರ್,ಕೇಂದ್ರ ಸಹ ಸಂಚಾಲಕ ಗಣೇಶ್ ಪಿ. ಉಪಸ್ಥಿತರಿದ್ದರು.
ಬಿ.ಚಿದಾನಂದ ಬಾಳಿಗ ಸ್ವಾಗತಿಸಿ, ದಾಮೋದರ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿ,ತಾಲೂಕು ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ರವೀಂದ್ರ ಕೆ. ವಂದಿಸಿದರು.
ಶಿಬಿರದಲ್ಲಿ ವಿಶೆಷ ಚೇತನಾ ಮಕ್ಕಳಿಗಾಗಿ ಛದ್ಮವೇಶ,ಸಾಮೂಹಿಕ ನೃತ್ಯ ಹಾಗೂ ಆಟೋಟಗಳನ್ನು ಏರ್ಪಡಿಸಲಾಗಿತ್ತು. 170ಕ್ಕೂ ಮಿಕ್ಕಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.

20191203 110658 300x225

Related Articles

Leave a Reply

Your email address will not be published. Required fields are marked *