ಕಂದಾವರ ರಘುರಾಮ ಶೆಟ್ಟರಿಗೆ ಬಂಟ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ…

ಮಂಗಳೂರು: ಜಾಗತಿಕ ಬಂಟ ಪ್ರತಿಷ್ಠಾನದ ಆಶ್ರಯದಲ್ಲಿ ಜರಗಿದ 26 ನೇ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ರೂ.25 ಸಾವಿರ ನಗದಿನೊಂದಿಗೆ ನೀಡಲಾಗುವ ಡಾ.ಡಿ.ಕೆ.ಚೌಟ ದತ್ತಿನಿಧಿ ಪ್ರಶಸ್ತಿಯನ್ನು ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರು ರಘುರಾಮ ಶೆಟ್ಟರಿಗೆ ಪ್ರದಾನ ಮಾಡಿದರು.
ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿ – ಯಕ್ಷಗಾನ,ನಾಟಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವುದರ ಜತೆಗೆ ತೆಂಕು – ಬಡಗು ಮೇಳಗಳು ಆಡಿ ಜಯಭೇರಿ ಗಳಿಸಿದ 36 ಜನಪ್ರಿಯ ಪ್ರಸಂಗಗಳನ್ನು ಬರೆದಿರುವ 87ರ ಹರೆಯದ ಕಂದಾವರ ರಘುರಾಮ ಶೆಟ್ಟರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸಿದರು.
ಜಾಗತಿಕ ಬಂಟ ಪ್ರತಿಷ್ಠಾನದ ಪೋಷಕರಾದ ಡಾ.ಬಿ.ಆರ್.ಶೆಟ್ಟಿ, ಮಾಜಿ ಅಧ್ಯಕ್ಷ ಡಾ.ಎಂ. ಶಾಂತಾರಾಮ ಶೆಟ್ಟಿ , ಉಪಾಧ್ಯಕ್ಷ ಕುಶಲ್ ಎಸ್.ಹೆಗ್ಡೆ, ಗಣ್ಯರಾದ ಕೆ.ಸಚ್ಚಿದಾನಂದ ಹೆಗ್ಡೆ, ಡಾ.ಬಿ.ಸಂಜೀವ ರೈ, ಸಿಎ.ರಘುಚಂದ್ರ ಶೆಟ್ಟಿ, ಆಯ್ಕೆ ಸಮಿತಿಯ ಪ್ರೊ.ಜಿ.ಆರ್.ರೈ ಮತ್ತು ಪಳ್ಳಿ ಕಿಶನ್ ಹೆಗ್ಡೆ, ಸನ್ಮಾನಿತರ ಬಂಧುಗಳಾದ ಶೈಲಜಾ ಮತ್ತು ಅಭಿರಾಮ ಶೆಟ್ಟಿ ಉಪಸ್ಥಿತರಿದ್ದರು.
ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು.

Related Articles

Back to top button