ಮತೀಯ ಹತ್ಯೆಗಳನ್ನು ಸಮರ್ಥಿಸಿ ಶರಣ್ ಪ್ರಚೋದನಕಾರಿ ಹೇಳಿಕೆ- ಪೊಲೀಸರು ಕ್ರಮ ಕೈಗೊಳ್ಳುವಂತೆ ಸುಳ್ಯ ತಾಲೂಕು ಮುಸ್ಲಿಮ್ ಒಕ್ಕೂಟ ಒತ್ತಾಯ…

ಸುಳ್ಯ: ವಿ.ಎಚ್.ಪಿ ಸಂಘಟನೆ ಶರಣ್ ಪಂಪ್ ವೆಲ್ ಮೂಲಕ, ಮುಂದಿನ ತನ್ನ ರಾಜಕೀಯ ಅಸ್ತಿತ್ವದ ಬೆಳವಣಿಗೆಗಳ ನ್ನು ಗುರಿಯಾಗಿಸಿ ‘ ಬಜರಂಗದಳ ಶೌರ್ಯ ‘ ಯಾತ್ರೆ ಹೆಸರಿನಲ್ಲಿ ಕರ್ನಾಟಕದಾದ್ಯಂತ ಮತೀಯ ಪ್ರಚೋದನೆಯನ್ನು ಸೃಷ್ಟಿಸುವ ಹುನ್ನಾರದಿಂದ ಪ್ರಚೋದನಕಾರಿ ಹೇಳಿಕೆಗಳಿಗೆ ನಾಂದಿ ಹಾಡಲಾಗುತ್ತಿದೆ. ಅದರ ಭಾಗವಾಗಿ ಗುಜರಾತಿನ ಮುಸ್ಲಿಮರ ಹತ್ಯೆ,ಸುರತ್ಕಲ್ ಫಾಝಿಲ್ ಹತ್ಯೆ, ಜೈಲಿನಲ್ಲಿ ಇರುವ ಆರೋಪಿಗಳಿಗೆ ಹೊರಗಿನಿಂದ ಕುಮ್ಮಕ್ಕು ಕೊಟ್ಟು ಮೈಸೂರು ಜೈಲಿನಲ್ಲಿ ಮುಸ್ತಫಾ ಕಾವೂರು ಹತ್ಯೆ, ತುಮಕೂರಿನಲ್ಲಿ ಸಂಭಾವ್ಯ ಗಲಭೆಗೆ ಪ್ರಚೋದನೆ, ಒಬ್ಬನನ್ನು ಮುಟ್ಟಿದರೆ ಹತ್ತು ಜನ ಆಸ್ಪತ್ರೆಯಲ್ಲಿ ಇರುತ್ತಾರೆ ಎಂಬ ಸಂಭಾವ್ಯ ಹಲ್ಲೆಗೆ ಪ್ರಚೋದನೆ, ‘ ನಮ್ಮ ಕೈಯಲ್ಲಿ ತಲವಾರು ಇರುತ್ತದೆ ‘ ಎಂಬ ಹೇಳಿಕೆಯಿಂದ ಅಪರಾಧಕ್ಕೆ ಪ್ರೇರಣೆ ಹೊಂದುವಂತಹ ಹೇಳಿಕೆಯನ್ನು ಸಾರ್ವಜನಿಕವಾಗಿ ಮತ್ತು ಮುಕ್ತವಾಗಿ ಕಾನೂನಿನ ಪಾಲಕರುಗಳ ಸಮಕ್ಷಮವೇ ನೀಡಿರುತ್ತಾರೆ. ಶರಣ್ ಪಂಪ್ ವೆಲ್ ಎಂಬ ವಿ.ಎಚ್.ಪಿ ಏಜೆಂಟ್ ನ ಮುಖಾಂತರ ಕರ್ನಾಟಕದಾದ್ಯಂತ ಈ ರೀತಿಯಲ್ಲಿ ಗಲಭೆಗೆ ಮುನ್ನುಡಿ ಬರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಗಲಭೆ ಸ್ಫೋಟ ಗೊಂಡರೆ ಅದಕ್ಕೆ ಮುಖ್ಯ ಕಾರಣ ಈ ಹೇಳಿಕೆ ಗಳಿಂದಲೆ ಎಂಬುದನ್ನು ವಿವೇಚಿಸಬೇಕು. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕರ ಕೊಲೆ, ದೊಂಬಿ, ಗಲಭೆ, ನೈತಿಕ ಪೊಲೀಸ್ ಗಿರಿಗೆ ಪ್ರೇರಣೆ ಹಾಗೂ ಪ್ರಮುಖ ಸೂತ್ರದಾರನಾಗಿರುವ ಶರಣ್ ಪಂಪ್ ವೆಲ್ ನನ್ನು ಬಂದಿಸಿ ಪೊಲೀಸರು ತಕ್ಷಣ ಪ್ರಕರಣ ದಾಖಲಿಸ ಬೇಕಿದೆ. ಜಿಲ್ಲೆಯಲ್ಲಿ ನಡೆದ ಎಲ್ಲಾ ಅಹಿತಕರ ಘಟನೆಗಳ ಬಗ್ಗೆ ಯುಎಪಿಎ ಅಡಿಯಲ್ಲಿ ಮರು ತನಿಖೆ ನಡೆಸಿ ಪ್ರಕರಣ ದಾಖಲಿಸಿ ಪೊಲೀಸ್ ಇಲಾಖೆ ಶರಣ್ ಪಂಪ್ ವೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಳ್ಳಿ ಈ ವ್ಯಕ್ತಿಯ ಮೇಲೆ ಕಾನೂನಿನ ಪ್ರಕಾರ ಕೇಸ್ ದಾಖಲಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಮುಸ್ಲಿಂ ಒಕ್ಕೂಟ ಸಿದ್ದವಾಗಿದೆ ಎಂದು ಸುಳ್ಯ ತಾಲೂಕು ಮುಸ್ಲಿಮ್ ಒಕ್ಕೂಟದ ಸಂಚಾಲಕರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ಕೆ ಎಸ್ ಉಮರ್ ಸಹ ಸಂಚಾಲಕರು, ಕೆಎಂ ಮುಸ್ತಫ, ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ಕೆ. ಬಿ. ಅಬ್ದುಲ್ ಮಜೀದ್ ಪತ್ರಿಕಾ ಹೇಳಿಕೆಯ ಮುಖಾಂತರ ಒತ್ತಾಯಿಸಿದ್ದಾರೆ.