ಪೊಳಲಿ-ತೆಂಕು ತಿಟ್ಟಿನ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯರ ಸಂಸ್ಮರಣಾ ಕಾರ್ಯಕ್ರಮ…
ಬಂಟ್ವಾಳ :ಯಕ್ಷಕಲಾ ಪೊಳಲಿ ಹಾಗೂ ಯಕ್ಷಧ್ರುವ ಪೊಳಲಿ ಇದರ ಅಶ್ರಯದಲ್ಲಿ ತೆಂಕು ತಿಟ್ಟಿನ ಹಿರಿಯ ಭಾಗವತರಾದ ಕೀರ್ತಿಶೇಷ ದಿನೇಶ್ ಅಮ್ಮಣ್ಣಾಯರ ಸಂಸ್ಮರಣಾ ಕಾರ್ಯಕ್ರಮ “ರಸರಾಗ ಚಕ್ರವರ್ತಿಗೆ ರಸಾಭಿಷೇಕ”ವು ನ. 23ರಂದು ಆದಿತ್ಯವಾರ ಶ್ರೀ ಕ್ಷೇತ್ರ ಪೊಳಲಿಯ ಸರ್ವಮಂಗಳ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಕೆನರಾ ಪ ಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದರು ಜಿ ಶಂಕರ ಶೆಟ್ಟಿ ದೀಪ ಬೆಳಗಿಸಿ ಕೀರ್ತಿಶೇಷ ಅಮ್ಮಣ್ಣಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಜೆ ನಡೆದ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಖ್ಯಾತ ಜ್ಯೋತಿಷಿ ಕೋಡಿಮಜಲು ಅನಂತ ಪದ್ಮನಾಭ ಉಪಾದ್ಯಾಯ, ಭುಜಬಲಿ ಧರ್ಮಸ್ಥಳ,ಮಾಜಿ ಮುತ್ಸದ್ದಿ ಜಮಾ ಉಗ್ರಾಣ ಶ್ರೀ ಕ್ಷೇತ್ರ ಧರ್ಮಸ್ಥಳ,ಇರಾ ಶ್ರೀ ಸೋಮನಾಥಪುರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಜಗದೀಶ್ ಶೆಟ್ಟಿ ಇರಾಗುತ್ತು ಉಪಸ್ಥಿತರಿದ್ದರು.
ಯಕ್ಷಗಾನ ವಿಮರ್ಶಕ ಶಾಂತರಾಮ ಕುಡ್ಡ ಮೂಡುಬಿದಿರೆ, ಸಂಕಪ್ಪ ಶೆಟ್ಟಿ ನಿವೃತ್ತ ಮುಖ್ಯೋಪಾದ್ಯಾಯರು,ಮದ್ದಳೆಗಾರ ಕೃಷ್ಣ ಪ್ರಕಾಶ್ ಉಳಿತ್ತಾಯ ಪರ್ಮಂಕಿ, ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ, ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಕಲಾವಿದ ಶಿವಪ್ಪಜೋಗಿ ಬಾಯಾರು ನುಡಿನಮನ ಸಲ್ಲಿಸಿದರು.
ಯಕ್ಷದ್ರುವ ಪೊಳಲಿಯ ಸಂಚಾಲಕ ಲೋಕೇಶ್ ಭರಣಿ, ಪ್ರಮುಖರಾದ ಮೋಹನ್ ಬಿಲ್ವಪತ್ರೆ, ನವೀನ್ ಕಟ್ಟಪುಣಿ, ಕೃಷ್ಣನಂದ ಹೊಳ್ಳ, ಸುಭಾಸ್ ಹೊಳ್ಳ, ಸುಬ್ರಾಯ ಕಾರಂತ, ಮೋಹನ್ ಕುಮಾರ್ ಅಮುಂಜೆ ಉಪಸ್ಥಿತರಿದ್ದರು.
ಯಕ್ಷಕಲಾ ಪೊಳಲಿಯ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿ, ಸಂಘಟಕ ಬಿ ಜನಾರ್ದನ ಅಮುಂಜೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಗಂಟೆ 2 ರಿಂದ 5 ರವರೆಗೆ “ಯಕ್ಷಾಭಿಷೇಕ” ಸುಪ್ರಸಿದ್ದ ಕಲಾವಿದರಿಂದ ‘ಸಾಯುಜ್ಯ ಸಂಪ್ರಾಪ್ತಿ’ ಎಂಬ ಯಕ್ಷಗಾನ, ರಾತ್ರಿ 7ರಿಂದ 9ರವರೆಗೆ “ಗಾನಾಭಿಷೇಕ” ಸಲುವಾಗಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಗಾನ ವೈಭವ ನಡೆಯಿತು.



