ಬಂಟ್ವಾಳ – ವೆಂಕಟ್ರಮಣ ಸ್ವಾಮಿ ಟೆಂಪಲ್ ಪದವಿ ಪೂರ್ವ ಕಾಲೇಜು ಶುಭಾರಂಭ…

ಬಂಟ್ವಾಳ: ವೆಂಕಟ್ರಮಣ ಸ್ವಾಮಿ ಟೆಂಪಲ್ ಪದವಿಪೂರ್ವ ಕಾಲೇಜು ಬಂಟ್ವಾಳ ವಿಧ್ಯುಕ್ತವಾಗಿ ಬುಧವಾರ ಸರಸ್ವತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು. 132 ವರ್ಷಗಳ ಇತಿಹಾಸ ಹೊಂದಿರುವ ಬಂಟ್ವಾಳ ಎಸ್.ವಿ.ಎಸ್. ಟೆಂಪಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಪದವಿಪೂರ್ವ ಕಾಲೇಜು ಪ್ರಾರಂಭವಾಗಿದೆ.
ಎಸ್.ವಿ.ಎಸ್.ಶಾಲೆಯ ಸಭಾಂಗಣದಲ್ಲಿ ಜೂ.19 ರಂದು ನಡೆದ ಸರಳ ಸಮಾರಂಭದಲ್ಲಿ ಆಡಳಿತ ಮಂಡಳಿಯ ಪರವಾಗಿ ಕೋಶಾಧಿಕಾರಿ ಬಿ.ಸುರೇಶ್ ಬಾಳಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ಮತ್ತು ವಾಣಿಜ್ಯ ತರಗತಿಗಳ ಸಂಯೋಜನೆಗಳನ್ನು ಒಳಗೊಂಡ ಪದವಿ ಪೂರ್ವಕಾಲೇಜು ಬಂಟ್ವಾಳದ ಕೇಂದ್ರ ಪ್ರದೇಶವಾದ ಎಸ್.ವಿ.ಎಸ್.ಟೆಂಪಲ್ ಸ್ಕೂಲ್ನ ಕ್ಯಾಂಪಸ್ನಲ್ಲಿ ಆರಂಭಗೊಂಡಿದೆ. ಪಿಯುಸಿ ವಿದ್ಯಾಭ್ಯಾಸವನ್ನು ಮುಂದುವರಿಸುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಉತ್ತಮ ವ್ಯವಸ್ಥೆಗಳೊಂದಿಗೆ ಒಳ್ಳೆಯ ಪರಿಸರ ಇದೆ ಎಂದರು. ಸಾಮಾಜಿಕ ಕಾರ್ಯಕರ್ತ ಪ್ರಭಾಕರ ಪ್ರಭುಗಳ ನಿರಂತರ ಪ್ರಯತ್ನದಿಂದ ಕಾಲೇಜು ತುರ್ತಾಗಿ ಆರಂಭಗೊಳ್ಳುವುದಕ್ಕೆ ಸಾಧ್ಯವಾಯಿತು ಎಂದು ಅವರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಅಶೋಕ ಶೆಣೈ, ಸಂಚಾಲಕ ಭಾಮಿ ನಾಗೇಂದ್ರನಾಥ ಶೆಣೈ, ಮ್ಯಾನೇಜಿಂಗ್ ಟ್ರಸ್ಟ್ ಸದಸ್ಯರಾದ ಸೂರ್ಯನಾರಾಯಣ ಬಾಳಿಗ , ಅವಿನಾಶ ಕಾಮತ್, ಲಕ್ಷ್ಮೀ ನಾರಾಯಣಯ್ಯ, ಬಿ.ಪ್ರಶಾಂತ ಪೈ, ಗಣೇಶ ಪೈ, ಸುಬ್ರಾಯ ನಾಯಕ್ ವೆಂಕಟ್ರಮಣ ಶೆಣೈ, ಭಾಮಿ ಲಕ್ಷ್ಮಣ ಶೆಣೈ, ಪ್ರಶಾಂತ ಕಿಣಿ ಉಪಸ್ಥಿತರಿದ್ದರು.
ಅರ್ಚಕರಾದ ಮುರಳೀಧರ ಭಟ್ ವೈದಿಕ ಪ್ರಾರ್ಥನೆಯೊಂದಿಗೆ ಸರಸ್ವತಿ ಪೂಜೆ ನೆರವೇರಿಸಿದರು. ಸಂಸ್ಥೆಯ ಉಪನ್ಯಾಸಕರು , ಸಿಬ್ಬಂದಿಗಳು ಮತ್ತು ದೇವಸ್ಥಾನದ ಆಡಳಿತ ವರ್ಗದವರು ಉಪಸ್ಥಿತರಿದ್ದರು. ನೂತನ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿ ಪರಿಚಯಿಸಿದರು. ಉಪನ್ಯಾಸಕ ವೆಂಕಟೇಶ ನಾಯಕ್ ವಂದಿಸಿದರು.