ಕರ್ನಾಟಕ ಪ್ರೌಢಶಾಲೆ ಮಾಣಿ- ವಿಶ್ವ ಯೋಗ ದಿನಾಚರಣೆ…

ಬಂಟ್ವಾಳ: ಶರೀರಕ್ಕೆ ಅನ್ನ, ಮನಸ್ಸಿಗೆ ಜ್ಞಾನ, ಆತ್ಮಕ್ಕೆ ಧ್ಯಾನ; ಪಂಚಮಯ ಕೋಶಗಳಿಂದ ಆತ್ಮೋದ್ಧಾರ; ಅಷ್ಟಾಂಗ ಯೋಗದ ಮೂಲಕ ಮನಸ್ಸು ಮತ್ತು ಶರೀರವನ್ನು ಬೆಸೆಯುವ ಸೇತುವೆಯೇ “ಯೋಗ” ಎಂದು ಎಸ್.ವಿ.ಎಸ್. ದೇವಳ ಪದವಿ ಪೂರ್ವ ಕಾಲೇಜು-ಬಂಟ್ವಾಳ ಇದರ ಉಪನ್ಯಾಸಕರು ಹಾಗೂ ಪತ್ರಕರ್ತರಾದ ಶ್ರೀ ಜಯಾನಂದ ಪೆರಾಜೆ ನುಡಿದರು.
ಅವರು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ನಡೆದ 10ನೇ ವರ್ಷದ ವಿಶ್ವ ಯೋಗ ದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಏಕಾಗ್ರತೆ, ನೆನಪು ಶಕ್ತಿ, ಉತ್ತಮ ಸಂಸ್ಕಾರ, ರೋಗ ಮುಕ್ತರಾಗಿ ಬಾಳಲು ಯೋಗಾಭ್ಯಾಸ ಅತ್ಯಂತ ಉಪಯುಕ್ತ ಎಂದರು.
ದೀಪ ಪ್ರಜ್ವಲನೆ,ಯೋಗ ಪ್ರಾರ್ಥನೆ, ಸರಳ ವ್ಯಾಯಾಮ ನಿಂತು, ಕುಳಿತು, ಹೊಟ್ಟೆಯ, ಬೆನ್ನಿನ ಸಹಾಯದಿಂದ ಮಾಡುವ ಯೋಗ – ಪ್ರಾಣಾಯಾಮ – ಧ್ಯಾನ – ಶಾಂತಿ ಮಂತ್ರ ಮತ್ತು ಪ್ರತಿಜ್ಞಾ ಸ್ವೀಕಾರ ಇತ್ಯಾದಿ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ನಡೆಸಲಾಯಿತು.
ಮುಖ್ಯ ಶಿಕ್ಷಕರಾದ ಎಸ್.ಚೆನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಮಾಣಿ, ಹಿರಿಯ ಶಿಕ್ಷಕಿ ಐ.ಜಯಲಕ್ಷ್ಮಿ ,ಸುಶ್ಮಿತಾ, ಅಭಿಲಾಶ್ ಕುಮಾರ್ ಜಿ., ತಿಮ್ಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಶಿಕ್ಷಕಿ ಶ್ಯಾಮಲಾ ಕೆ.ಸ್ವಾಗತಿಸಿ ಗಂಗಾಧರ ಗೌಡ ವಂದಿಸಿ, ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.