ಶಾರದಾ ಪೂಜೆ ಮಹೋತ್ಸವ- ಪೂರ್ವಸಿದ್ಧತಾ ಸಭೆ…

ಬಂಟ್ವಾಳ: ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಹಾಗೂ ಸುಭಾಷ್ ಯುವಕ ಮಂಡಲ(ರಿ) ಸುಭಾಷ್ ನಗರ ಜಂಟಿ ಆಶ್ರಯದಲ್ಲಿ 98ನೇ ಸಾರ್ವಜನಿಕ ಶ್ರೀ ಶಾರದಾ ಪೂಜೆ ಮಹೋತ್ಸವ ಸಿದ್ಧತಾ ಸಭೆ ಆ.11 ರಂದು ನಡೆಯಿತು.
ನವರಾತ್ರಿಯ ಪರ್ವಕಾಲದಲ್ಲಿ ಮೂಲ ನಕ್ಷತ್ರದಿಂದ ಆರಂಭಗೊಂಡು ಮಹಾ ನವಮಿ ತನಕ ಮೂರು ದಿನಗಳ ಪರ್ಯಂತ ಸಜೀಪ ಮೂಡ ಗ್ರಾಮದಲ್ಲಿ 98ನೇ ವರ್ಷದ ಶಾರದಾ ಪೂಜೆ ಮಹೋತ್ಸವ ನಡೆಯಲಿದ್ದು, ಈ ಬಗ್ಗೆ ಪೂರ್ವಸಿದ್ಧತಾ ಸಭೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ನಾಟಕ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಅನ್ನದಾನ, ಧಾರ್ಮಿಕ ಕಾರ್ಯಕ್ರಮಗಳನ್ನು ಮೂರು ದಿನ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಸಮಿತಿಯ ಪ್ರಮುಖರಾದ ಕಿಶೋರ್, ಯೋಗೀಶ್ ಬೆಲ್ಚಡ, ಎಸ್ ಶ್ರೀನಾಥ ಶೆಟ್ಟಿ, ಗಿರೀಶ್ ಕುಮಾರ್ ಪೆರ್ವಾ, ಗಂಗಾಧರ ಕೊಲ್ಯ, ಪ್ರಹ್ಲಾದ, ಸಂತೋಷ್, ಚೆನ್ನಪ್ಪ, ಯೋಗೀಶ್, ರವಿಚಂದ್ರ, ಅಶ್ವಿತ್ ಮೊದಲಾದವರು ಉಪಸ್ಥಿತರಿದ್ದರು.