ಕಲ್ಲಡ್ಕ ಕ್ಲಸ್ಟರ್- ಶಿಕ್ಷಕರ ಸಮಾಲೋಚನಾ ಸಭೆ…

ಬಂಟ್ವಾಳ:ಕನ್ನಡ ಭಾಷೆ ,ಸಾಹಿತ್ಯದ ಬೆಳವಣಿಗೆಗೆ ಪ್ರಾಥಮಿಕ ಮಟ್ಟದಲ್ಲಿಯೇ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ತಾಯಿಯಿಂದ ಮಾತೃಭಾಷೆಯ ಮೂಲಕ ಕನ್ನಡ ಭಾಷೆಯಲ್ಲಿ ಸಂವಹನ ನಡೆದಾಗ ಭಾಷೆ ಗಟ್ಟಿಯಾಗುತ್ತದೆ. ಶಿಕ್ಷಕರು ಮೊದಲು ತನ್ನನ್ನು ತಾನು ಅರಿತು ಕೊಂಡಾಗ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಪರಿಣಾಮಗಳನ್ನು ಉಂಟುಮಾಡಲು ಸುಲಭ ಸಾಧ್ಯವಾಗುತ್ತದೆ. ತಾನು ಬದಲಾಗಿ ತನ್ನ ಜೊತೆಗೆ ಇತರರನ್ನು ಹೊಂದಿಕೊಂಡು ಬೆಳೆಯುವುದೇ ಶಿಕ್ಷಕ ಧರ್ಮ ಎಂದು ಉಪನ್ಯಾಸಕ ಜಯಾನಂದ ಪೆರಾಜೆ ಹೇಳಿದರು.
ಅವರು ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರ ಕಂಬ ಪ್ರಾಥಮಿಕ ಶಾಲೆಯಲ್ಲಿ ಆ.17 ರಂದು ನಡೆದ ಕಲ್ಲಡ್ಕ ಕ್ಲಸ್ಟರ್ ನ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವ್ಯಕ್ತಿತ್ವ ವಿಕಸನ ತರಬೇತಿ ನಡೆಸಿಕೊಟ್ಟರು. ಶಿಕ್ಷಕರ ಸಮಸ್ಯೆಗಳ ಸಮಾಲೋಚನೆ ನಡೆಸಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಮಾದರಿ ಶಾಲೆಯ ಮುಖ್ಯಶಿಕ್ಷಕ ಮೊಹಮ್ಮದ್ ಅಶ್ರಫ್ ಅತಿಥಿಯಾಗಿದ್ದರು.
ಮಜಿ ಶಾಲೆಯ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮ ಪಿ .ಜಿ . ಧನ್ಯವಾದವಿತ್ತರು.