ಕಾಸರಗೋಡು- -ಮಾನ್ಯ ಗ್ರಾಮದ ಕಾಂಗ್ರೆಸ್ ಚುನಾವಣಾ ಕಛೇರಿ ಟಿ.ಎಂ ಶಾಹಿದ್ ತೆಕ್ಕಿಲ್ ರವರಿಂದ ಉದ್ಘಾಟನೆ…

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಮೋಹನ್ ಉಣ್ಣಿಕಾನ್ ಅವರ ಪರವಾಗಿ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾನ್ಯ ಗ್ರಾಮದ ಬೂತ್ 71, 72 ಮತ್ತು 73 ರ ಕಾಂಗ್ರೆಸ್ ಚುನಾವಣಾ ಕಛೇರಿಯನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಟಿ.ಎಂ ಶಾಹಿದ್ ತೆಕ್ಕಿಲ್ ಮುಂದಿನ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷವು 20ಕ್ಕೆ 20 ಹಾಗೂ ಕರ್ನಾಟಕದಲ್ಲಿ 28 ಕ್ಕೆ 25 ಸ್ಥಾನಗಳನ್ನು ಪಡೆದು ಕೇಂದ್ರದಲ್ಲಿ ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ಕೇರಳದ ಜನರು ಡಿ.ಕೆ. ಶೀವಕುಮಾರ್ ಅವರಿಗೆ ನೀಡುತ್ತಿರುವ ಪ್ರೀತಿ ಮತ್ತು ಜನ ಬೆಂಬಲವನ್ನು ನೋಡಿ ನರೇಂದ್ರ ಮೋದಿಯವರೇ ಚಿಂತಾಕ್ರಾಂತರಾಗಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಸರಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ದೇಶದ ಉದ್ದಗಲಕ್ಕೂ ಮನೆಮಾತಾಗಿದ್ದು, ಇದೀಗ ಕೇಂದ್ರ ಸರಕಾರ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ನಕಲನ್ನು ಮಾಡುತ್ತಿದೆ. ಮೋದಿಯವರು ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿಯವರ ಜನಪ್ರಿಯತೆಯನ್ನು ಕಂಡು ಭ್ರಮನಿರಸನರಾಗಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ಶ್ಯಾಂಪ್ರಸಾದ್ ಮಾನ್ಯ ವಹಿಸಿದ್ದರು. ಮುಖಂಡರಾದ ಖಾದರ್ ಮಾನ್ಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಸದಸ್ಯ ಸಿದ್ಧಿಕ್ ಕೊಕ್ಕೊ, ಯುಡಿಎಫ್ ನಾಯಕರು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.