ಗೋವಿನತೋಟ – ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ,ಗೋ ನವರಾತ್ರಿ ಉತ್ಸವಕ್ಕೆ ಚಾಲನೆ…

ಬಂಟ್ವಾಳ: ಎಲ್ಲಾ ದೇವತೆಗಳ ಸನ್ನಿಧಾನ ಗೋವಿನಲ್ಲಿದೆ. ಗೋವಿನ ರಕ್ಷಣೆ ಮಾಡುವುದರಿಂದ ಸದ್ಬುದ್ಧಿ ಸಿಗುತ್ತದೆ. ಗೋ ಎಂದರೆ ವೇದ, ಸೂರ್ಯ ಕಿರಣ.ಆದ್ದರಿಂದ ಇನ್ನು ಒಂಭತ್ತು ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ಗೋವಿನ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಭಗವಂತನ ಅನುಗ್ರಹದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಗೋವಿನಿಂದ ಬಂದ ಪ್ರಸಾದ ಸ್ವೀಕರಿಸಿದರೆ ಗೋಪಾಲ ಕೃಷ್ಣ ರಕ್ಷಣೆ ಮಾಡುತ್ತಾನೆ ಎಂದು ಅದಮಾರು ಮಠದ ಪರಮ ಪೂಜ್ಯ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದಂಗಳರವರು ಹೇಳಿದರು.
ಅವರು ರಾಧಾ ಸುರಭಿ ಗೋ ಮಂದಿರ ಗೋವಿನತೋಟ ನಡೆಯುವ ದಕ್ಷಿಣ ಭಾರತದಲ್ಲಿಯೇ ಪ್ರಥಮ ಅಷ್ಟೋತ್ತರ ಶತ (108) ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ,1108 ನಾರಾಯಣ ಕವಚ ಯಾಗ ಮತ್ತು ಗೋ ನವರಾತ್ರಿ ಉತ್ಸವವನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಫರಂಗಿಪೇಟೆ ಶ್ರೀ ವರದೇಶ್ವರ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯ ಮೂಲಕ ಗೋ ಮಂದಿರಕ್ಕೆ ಸಾಗಿ ಬಂತು. ಶೋಭಯಾತ್ರೆಯಲ್ಲಿ ಚೆಂಡೆ, ವಾದ್ಯ,ಗೊಂಬೆ, ಕುಣಿತ ಭಜನೆ,108ಗೋಪಾಲ ಕೃಷ್ಣರು,108 ಕಲಶದೊಂದಿಗೆ ಮಾತೆಯರು, ಸ್ಥಬ್ದಚಿತ್ರ, ಮೆರವಣಿಗೆಗೆ ಮೆರಗು ನೀಡಿತು.
ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜಿ, ವೃಂದಾವನದ ಪೂಜ್ಯ ರಮೇಶ್ ಗೊಸ್ವಾಮಿ, ಬ್ರಿಜೇಶ್ ಗೋ ಸ್ವಾಮಿ, ಗೋ ಸೇವಾ ಗತಿ ವಿಧಿಯ ಪ್ರವೀಣ ಸರಳಾಯ,ಉತ್ಸವ ಸಮಿತಿಯ ಗೌರವಧ್ಯಕ್ಷ ಐತಪ್ಪ ಆಳ್ವ ಸುಜಿರುಗುತ್ತು, ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಪ್ರಮುಖರಾದ ಕೃಷ್ಣ ಕುಮಾರ್ ಪೂಂಜ, ರವೀಂದ್ರ ಕಂಬಳಿ, ರಾಮದಾಸ ಬಂಟ್ವಾಳ, ಗಣೇಶ ಸುವರ್ಣ ತುಂಬೆ, ಅನಿಲ್ ಪಂಡಿತ್, ಪಿ ಸುಬ್ರಮಣ್ಯ ರಾವ್,ನವೀನ ಚಾಪೆ, ವಿನಯ ಕಡೆಗೋಳಿ ಮತ್ತಿತರರು ಇದ್ದರು.